ಮಂಗಳವಾರ, ಆಗಸ್ಟ್ 16, 2011

ಪಾಚಿ ಮತ್ತು ವೀಚಿ

ಹಸಿವ ತಿಂದ ಈ
ನಿನ್ನ ಮುದ್ದುಮುಖ
ತೊಳೆದ ಬೆಳ್ಳಿ ತಟ್ಟೆ
ನಿದಿರೆ ಕೊಂದ ಈ
ಅವಳಿ ಕಣ್ಣುಗಳು
ಗುಡಿಯ ಜೋಡಿ ದೀಪ

ಜೋಮು ಹಿಡಿಸಿ ಜ್ವರ
ತಂದ ಕೆಂಗೆನ್ನೆ
ಬಂಗಿ ಬೆಳೆವ ಗುಡ್ಡ
ಮತ್ತು ನೀಡಿ ನರ
ಜಗ್ಗಿದಂಥ ತುಟಿ
ನೀರ ಸುರಿವ ವೃಕ್ಷ

ನನ್ನ ಹೂತಿಟ್ಟ
ಗುಪ್ತ ಆತ್ಮಗುಹೆ
ದೋಣಿ ಇರದ ದ್ವೀಪ
ಒಡೆದ ಬಾಳಿನಲಿ
ನಮಗೆ ಸರಿತಾಳೆ
ಪಾಚಿ ಮತ್ತು ವೀಚಿ

ಭಾನುವಾರ, ಆಗಸ್ಟ್ 14, 2011

ಚಡ್ಡಿ ಅಂಗಿ

ಚಡ್ಡಿ ಅಂಗಿ ತಾ ತೊಟ್ಟು ಬರಲು ರವಿ
ನಿತ್ಯ ಸೂರ್ಯಗ್ರಹಣ
ಜರಿ ಷರಾಯಿ ಕರಿ ಕೋಟು ಧರಿಸೆ ಶಶಿ
ಶರಧಿಗೆಲ್ಲಿ ಪ್ರಣಯ

ಬೆಟ್ಟ ಜಲಪಾತ ಹೂವು ಮುಡಿದ ಬುವಿ
ಬೆತ್ತಲಲ್ಲೆ ಮಾನಿ
ಬಿಚ್ಚಿ ಗರಿಗಣ್ಣ ಕುಣಿವ ಆ ನವಿಲು
ವಸ್ತ್ರ ಬಯಸಲಿಲ್ಲ

ತನ್ನ ಸಹಜತೆಗೆ ತನಗೆ ಹೆಗ್ಗಳಿಕೆ
ಸೃಷ್ಟಿಯೋ ಪ್ರಬುದ್ದ
ಮುಚ್ಚಿಕೊಳುವ ಭ್ರಮೆಯಲ್ಲಿ ನರಜಂತು
ಮೂರು ಬಿಟ್ಟು ನಿಂತ

ಶುಕ್ರವಾರ, ಜುಲೈ 29, 2011

ಕಸಿವಿಸಿ ಕನಸು

ಎತ್ತೆತ್ತಲು ಮೆತ್ತಿಹ ಮನುಜನ ಬಾಡು
ರಣಲೋಕದ ಕಿಡಿ ಕಿಡಿ ಸುಡುಗಾಡು
ಸೊಕ್ಕಿಗೆ ಸಿಕ್ಕಿ ದಿಕ್ಕೆಟ್ಟಿಹ ಜಗ
ಉರಿವುದು ಕಾಣದೊ ಮೃತ್ಯುವು ಧಗಧಗ
ಅಗ್ನಿಯ ಅಪ್ಪುಗೆ ಆವರಿಸೆ ಜಗವ
ದಿಕ್ಕೆಟ್ಟಿಹ ಗತ್ತಿಲ್ಲದ ಮಾನವ
ಮುಗಿಲಿಗು ನೆಲಕೂ ಅಂತರವಿಲ್ಲ
ಸಿಡಿಮದ್ದುಗಳುಗುಳುವ ಹೊಗೆಯೇ ಎಲ್ಲ
ಪಸರಿಸಲೆಲ್ಲೆಡೆ ಪರಮಾಣುವಿನಲೆ
ಗುರಿಗಳಿಲ್ಲದೆ ಗುಡಿಗಿಹ ಧಾಂದಲೆ

ಅಂಗಗಳೆರಚಿವೆ ಸುತ್ತಲ ನೆಲದಲಿ
ರಂಗವು ತುಂಬಿದೆ ರಂಗಿನ ದ್ರವದಲಿ
ಸಾಗರ ನಿಲ್ಲದು ಒಂದೆಡೆಯೂರಿ
ಹರಿದಿದೆ ಎಲ್ಲೆಡೆ ನಗರದಿ ತೂರಿ
ತೇಲಿಹ ತನುಗಳು ಅರಚಿಹ ಮನಗಳು
ಅಲೆಗಳ ನಡುವಲಿ ಅಲೆದಿಹ ಜನಗಳು
ಮನೆಮಠವೆಲ್ಲವು ಮಸಣದ ತೆರದಿ
ಮಂಗಳವಾಡಲು ಮರಣದ ಸರದಿ
ಸದ್ದಿಲ್ಲದೆ ಸವೆದಿದೆ ಜೀವದ ಹಿಂಡು
ಗದ್ದಲ ಮರೆಸಿದೆ ಉಸಿರಿನ ಗುಂಡು

ಕೆಲವೇ ಕೆಲವೆಡೆ ಮನುಜನ ಬಳಗ
ಸೃಷ್ಟಿಯು ಚೆಲ್ಲಿತು ವೇದನೆ ಕೊರಗ
ಮೌನದಿ ಮಲಗಿಹ ಮಂದಣ ಲೋಕ
ಹೊಗೆಯಾಡುತಿರೆ ಎಲ್ಲೆಡೆ ಶೋಕ
ದೂರದಿ ನಿಂದು ಕಾಲನು ನಗುತಿರೆ
ಬಿಡಿಬಿಡಿ ಬಿಡಿಸಿದೆ ಸಿಟ್ಟಿನ ಹೊರಪೊರೆ
ತೆಪ್ಪಗೆ ತೆವಳಿದೆ ಶಾಂತದಿ ಧರೆಯು
ಸಪ್ಪಗೆ ಮಲಗಿದೆ ಗರ್ವದ ಧಗೆಯು
ಮೂಡಣದಲಿ ಹೊಸ ಸೂರ್ಯನ ಉದಯ
ಫಳ್ಳನೆ ಅರಳಿತು ಮಾನವ ಹೃದಯ

ಭಾನುವಾರ, ಜುಲೈ 24, 2011

ಕೊಚ್ಚೆ ನೀರ ಮೀನು

ಸಣ್ಣ ಬೀಜದಲಿ
ಅಡಗಿ ಕುಳಿತ ಮರ
ಕಣ್ಣು ಬಿಡದ ಬುದ್ಧ.
ದಟ್ಟ ಮೋಡದಲಿ
ಗುರುತೆ ಸಿಗದ ಹನಿ
ಚಿಪ್ಪಿನೊಡಲ ಬೆಳಕು.

ತತ್ತಿ ಗರ್ಭದಲಿ
ಬೆಚ್ಚಗಿರುವ ದ್ರವ
ಹಾರುವೆದೆಯ ತವಕ.
ಜಾವದಿಬ್ಬನಿಯ
ತೇವದಧರದಲಿ
ಉದಯದುಷೆಯ ಮೋಕ್ಷ.

ಸತತ ಕಾಲ್ತುಳಿತ
ಸಹಿಸಿ ನಗುವ ಪೊದೆ
ಕಡೆಗೆ ದಿವ್ಯ ದಾರಿ.
ತೊಗಲ ಜಾಲದಲಿ
ಸಿಲುಕಿದೀ ಆತ್ಮ
ಕೊಚ್ಚೆ ನೀರ ಮೀನು.

ಬುಧವಾರ, ಜುಲೈ 20, 2011

ಸುರಿಯಿತು ಬಿರುಮಳೆ

ಧೋ ಧೋ ಎನ್ನುತ ಸುರಿಯಿತು ಬಿರುಮಳೆ
ತಣ್ಣಗೆ ಮಲಗಿಸಿ ಕೆಂಧೂಳ
ಫಳಫಳ ಮಿಂಚಿನ ಆರತಿ ಎಲ್ಲೆಡೆ
ಢಂ ಢಂ ಗುಡುಗಿನ ಹಿಮ್ಮೇಳ

ಮರಗಿಡ ಬಳ್ಳಿಗೆ ಬೆಟ್ಟ ಕಲ್ಬಂಡೆಗೆ
ಸ್ನಾನ ಮುಗಿಸಿದ ಸಮಾಧಾನ
ಕಪ್ಪೆಯು ಮೆಲ್ಲಗೆ ಹೇಳಿತು ಮೀನಿಗೆ
ಹೊಸ ನೀರಲಿ ಬಾ ಈಜೋಣ

ನೆಲದಾ ಪರದೆಯ ಸರಿಸುತಾ ಬೀಜ
ಇಣಕಿದೆ ಗಗನಕೆ ಮುಖಮಾಡಿ
ಬಾ ಬಾ ಎನ್ನುತ ಬಿಸಿ ಕೈ ಚಾಚಲು
ಸೂರ್ಯನು ಎಡಬಲ ಎಲೆನೀಡಿ

ಹಿತ್ತಿಲಲಿ ಮೈ ಕಾಯಿಸಿಕೊಳುತಿದೆ
ಮಕ್ಕಳ ಮಣ್ಣಿನ ಗಣಪಯ್ಯ
ಕೆಸರಲಿ ತಕ ಥೈ ಎಳೆಪಾದಂಗಳು
ತಾತ ನೋಡದಿರಲಿ ದಮ್ಮಯ್ಯ

ಬಯಲು ಮತ್ತು ಬೇಲಿ

ಎಷ್ಟೊಂದು ಅನ್ಯೋನ್ಯ
ಬಯಲು ಬೇಲಿ
ನೆಟ್ಟ ಕೈಗೊಂದಿಷ್ಟು
ಪುಣ್ಯ ಬರಲಿ

ಅತ್ತಿತ್ತ ದಾಯಾದಿ
ಸ್ವಾರ್ಥ ಕಾವು
ನಡುವೆ ಬೇಲಿಯ ತುಂಬ
ನೀಲಿ ಹೂವು

ಭೂಪಟದ ಮೇಲಷ್ಟೆ
ದೇಶ ದೇಶ
ಬಯಲು ಬಲ್ಲುದೆ ಹೇಳು
ಭಿನ್ನ ಮನಸ

ಶುಕ್ರವಾರ, ಜುಲೈ 15, 2011

ಹಸಿರು ಗಿರಿಯ ತಪ್ಪಲಲ್ಲಿ

ಹಸಿರು ಗಿರಿಯ ತಪ್ಪಲಲ್ಲಿ 
ನಿಂತ ಬಿದಿರ ಬೊಂಬಿಗೆ 
ಕೃಷ್ಣ ಬಂದೆ ಬರುವನೆಂಬ
ದಟ್ಟವಾದ ನಂಬುಗೆ 

ಗೋವುಗಳನು ಮೇಯ ಬಿಟ್ಟು
ನೋಡದಿರನು ತನ್ನನು
ಸನಿಹ ಬಂದು ಒಲವ ಬೆರೆಸಿ
ಮಾಡದಿರನು ಕೊಳಲನು

ಊದಿ ಗೋವುಗಳನು ಕೂಗಿ
ಮಾಡಿಕೊಡುವ ಪರಿಚಯ
ನೆಗೆದು ಬರುವ ಕರುಗಳಲ್ಲಿ
ಥೇಟು ಅವನ ಅಭಿನಯ 

ರಾತ್ರಿ ರಾಧೆ ತೊಡೆಗೆ ಒರಗಿ
ಹರಿಸದಿರನು ನಾದವ
ಅವಳ ನಿದಿರೆ ಕೆಡಿಸಬಲ್ಲ  
ಮೋಡಿಗಾರ ಮಾಧವ 


ಗುರುವಾರ, ಜುಲೈ 14, 2011

ಅವಳ ಅವನು

ಕುಡಿಮೀಸೆ ತುಂಟನಗೆ ದಿಟ್ಟ ನಿಲುವು
ಕಿಚ್ಚಿಡುವ ಕಂಗಳಲಿ ತುಂಬಿದೊಲವು;
ಎದೆ ತೊಟ್ಟಿಲಲಿ ನಾನು ಪುಟ್ಟ ಮಗುವು
ನನ್ನವನ ತೆಕ್ಕೆಯಲಿ ನನ್ನ ಜಗವು.

ನಡುದಾರಿಯಲಿ ಒಮ್ಮೆ ಸಿಕ್ಕಿದವನು
ಜಡಗೊಂಡ ಜೀವವನು ಹೊಕ್ಕಿದವನು;
ತೊರೆಯಾಗಿ ನನ್ನೊಳಗೆ ಉಕ್ಕಿದವನು
ಕೊರಳೆಣೆದು ಕೊರಳಿಗೆ ತಾ ಬಿಕ್ಕಿದವನು.

ಅತಿ ಪ್ರೀತಿ ಮಿತ ಮಾತು ಭಾವ ಜೀವಿ
ತಾಯ್ಮಮತೆ ಹೆಂಗರುಳು ತುಂಬಿದರವಿ;
ಬೊಟ್ಟಿಟ್ಟು ಬೈತಲೆಗೆ ಹೂವ ಮುಡಿಸಿ
ಹಣೆ ಮೇಲೆ ತುಟಿ ಮುದ್ರೆ ಬಾಷ್ಪ ಬೆರಿಸಿ.

ದೀಪವನು ಊದುವನು ತೋಳ ಬಳಸಿ
ಸೀರೆ ಕುಪ್ಪಸಗಳಿಗು ಜೋಮು ಹಿಡಿಸಿ;
ಅದೆ ಕೋಣೆ ಅದೆ ಮಂಚ ರಾತ್ರಿ ಹೊಸದು
ಅಚ್ಚರಿಯ ಹಚ್ಚುವನು ಮೈಯ ಮಸೆದು.

ತುಂತುರು ಮಳೆ

ಕಿಟಕಿಯಾಚೆ ತುಂತುರು ಮಳೆ ಎದೆಯ ತುಂಬ ನೆನಪು
ತಣ್ಣನೆ ಹವೆ ಸೂಸುತಿರಲು ಅವಳ ಉಸಿರ ಕಂಪು

ಕಾರ್ಮುಗಿಲ ಜಗಲಿ ಮೇಲೆ ಅವಳ ದಟ್ಟ ಹೆರಳು
ಹನಿಯನುಟ್ಟ ಹೂವ ಪಕಳೆ ಚಿನ್ನದುಗುರ ಬೆರಳು

ಒದ್ದೆ ನೆಲದ ಕುರಿಯ ಹೆಜ್ಜೆ ಕೊಡದೆ ಉಳಿದ ಮುತ್ತು
ಕೊಳದ ತರತರಂಗ ಚಕ್ರ ಅವಳ ನೆರಳ ಗಸ್ತು

ಕಮಲದೆಲೆಯ ನೀರ ಗೋಲಿ ಹೊಳೆವ ತುಂಟ ಕಣ್ಣು 
ಏಳು ಬಣ್ಣದಾ ಬಿಲ್ಲಿನೊಳು ನಿಂತಳೇಕೆ ತಾನು

ಮಳೆಯ ಹನಿಗು ಕಣ್ಣ ಹನಿಗು ನಡುವೆ ಇರುವುದೇನು
ಅವಳೆ ಬಂದು ಹೇಳಬೇಕು ಕಾಯುತಿರುವೆ ನಾನು 


ಶುಕ್ರವಾರ, ಜುಲೈ 1, 2011

ಮಾನಸ ಸರೋವರ

ಮೈ ಚಾಚಿ ಮಲಗಿದ್ದ ಮನಸು
ಒಂದು ಸರೋವರ.

ಪಡುವಣ ಸೂರ್ಯನ ಚಿನ್ನದ ಕೋಲು
ತಿವಿಯುತಿತ್ತು ಬೆಚ್ಚಗೆ
ಮೌನದಲೆ
ಗಳಿಗೆ.

ರಾತ್ರಿ ಚಂಡಮಾರುತ;ಒಳಗೆಲ್ಲ
ಡುಬು ಡುಬು ಡುಬು,ಹೊರಗೆಲ್ಲ
ಪರ ಪರ ಪರ.

ಚಂದ್ರ,ನಕ್ಷತ್ರ-
ಇಂಥವರೆಲ್ಲ ಆಡಿಕೊಂಡು
ನಕ್ಕರು,ಬಿಚ್ಚಿ ಬಿಸಾಕಿ
ನಿಕ್ಕರು.

ಮೀನಾದಿ ತಿಮಿಂಗಿಲ,ಮೊಸಳೆ ಮಕ್ಕಳು
ಮರಿ ಕಳೆದುಕೊಂಡು ರೋಧಿಸಿದವು.

ನಡುಗಡ್ಡೆಗಳು ನಡು
ನಡುಗಿ,
ಹಡಗುಗಳು ಗಡ ಗಡ
ಗಾಬರಿ.ಬಂಡೆಗಳು ಬಿಕ್ಕಳಿಸಿ,ಜಲಚರ
ಗಳಿಗೆ
ಜಲ ಜಲ ಬೆವರ್ಜಳಕ.

ಜಾವದ ಹೊತ್ತಿಗೆ ನಿರಾಳ ಭೇದಿ
ನಿಂತ ಹೊಟ್ಟೆಯಷ್ಟೇ.

ಚಂದ್ರ,ನಕ್ಷತ್ರ
ಮುಖ ಮುಖ ನೋಡುತ ಗಂಭೀರವಾಗಿ
ಕಾಣೆಯಾದರು.

ಮೂಡಣ ಸೂರ್ಯನ ಚಿನ್ನದ ಕೋಲು
ತಿವಿಯುತಿತ್ತು ನಚ್ಚಗೆ
ರಾತ್ರಿ ಪೂರ ನಿದ್ದೆಗೆಟ್ಟು ಮಲಗಿದ್ದ ಅಲೆ
ಗಳಿಗೆ.

ಮೈ ಕೊಡವಿ ಮೇಲೆದ್ದ ಮನಸು
ಬೇರೊಂದು ಸರೋವರ.

ಭಾನುವಾರ, ಜೂನ್ 26, 2011

ಅನುಭವಿ ಯಾರು?

ಒಂದು ಪುರಾತನ ಮರ 
ಅಡಿಯಲ್ಲೊಬ್ಬ ಮುದುಕ
ಹೆಚ್ಚು ಅನುಭವಿ ಯಾರು ಹೇಳು ಇಬ್ಬರಲಿ.
ಕಾಲ ತಕ್ಕಡಿಯಲ್ಲಿ 
ತೂಗುತಿವೆ ಕಾಳ್ಜೊಳ್ಳು
ಯಾರು ಸಾರ್ಥಕ ಜೀವಿ ಬಾಳಿನಂಚಿನಲಿ?

ಹಕ್ಕಿ ಸಂಕುಲಗಳಿಗೆ
ಅಳಿಲು ಗೊದ್ದ ಜೇನಿಗೆ
ಕಡಿವ ಮನುಜಗು ನೆರಳ ಕೊಟ್ಟ ಹೆಮ್ಮರವೆ?
ತುತ್ತು ಬಟ್ಟೆಯ ನೀಡಿ 
ಮಕ್ಕಳಿಗೆ ನೆಲೆ ಮಾಡಿ
ಮುಕ್ತಿ ಹುಡುಕುತ ಹೊರಟ ಮುಗ್ಧ ಮುದಿಮನವೆ?

ಒಮ್ಮೆ ಹಸಿರು ಸೀರೆ 
ಒಮ್ಮೆ ಬರೀ ಬೆತ್ತಲು 
ಸೃಷ್ಟಿಯಾಜ್ಞೆಗೆ ಬದ್ದ ವೃಕ್ಷ ಪ್ರಬುದ್ಧವೆ?
ಅಷ್ಟ ಮದಗಳ ನುಂಗಿ 
ಕಟ್ಟ ಕಡೆಗೂ ಮಾಗಿ 
ಧ್ಯಾನ ಮೌನದಿ ಕುಳಿತ ವೃದ್ಧ ತಪಸ್ವಿಯೆ?

ಶನಿವಾರ, ಜೂನ್ 11, 2011

ಪ್ರೀತಿ

ಜೋಡಿ ಜೀವಗಳ ಕೂಡಿ ಹಾಕುವ ಮಧ್ಯವರ್ತಿ
ಬೇಡವೆಂದರು ರೂಢಿಯಾಗುವ ನಿತ್ಯ ಕರ್ಮ
ಗೂಢವಾಗಿಯೆ ಗೂಡು ಕಟ್ಟುವ ಮೂಕ ಹಕ್ಕಿ
ಬಿಕ್ಕಳಿಸುವ ಪ್ರಾಣಪಕ್ಷಿಯ ವಿರಹಗಾನ

ಉಸಿರಿನಲ್ಲಿ ಬಸಿರ ತಳೆವ ಜೇಷ್ಠ ಭ್ರೂಣ
ಒಲಿದ ಜೀವವ ಕಾಯುವಂಥ ಕಾಳಸರ್ಪ
ವಿರಹದುರಿಯ ಕುಲುಮೆಯಲಿ ಕರಗುವ ಲೋಹ
ಮನದ ಮರದಲಿ ಹಸಿರ ಹರಡುವ ಹರಿತ್ತು

ಒಡಲ ಹುತ್ತದಲಿ ಬುಸುಗುಡುವ ಖುಷಿಯ ನಾಗ
ಹೃದಯ ನೇಸರ ಸುರಿಯುವಂಥ ಕನಸ ಕಿರಣ
ಬದುಕು ಬರೆವ ಮಧುರ ಕಾವ್ಯದ ಮೊದಲ ಪದ
ಧಮನಿಯೊಳಗಿನ ರಮಣಿ ನುಡಿಸುವ ಮಧುರ ಸ್ವರ

ಎದೆಯ ಚರಕ ನೇಯುವಂಥ ಮೃದುಲ ವಸ್ತ್ರ
ತಬ್ಬಲಿ ಹೃದಯವ ತಬ್ಬಿಕೊಳ್ಳುವ ಒಂಟಿ ನೆಂಟ
ಮೌನವಾಗಿ ಮನದಿ ಮೊರೆವ ಏರುದನಿ
ಸ್ಫೂರ್ತಿ ಕೊಳದಿ ಪೂರ್ತಿ ಅರಳಿದ ಕಮಲಕುಲ

ಜಿಹ್ವೆ ಜಿನುಗಿಸುವ ಜೀವದೆಂಜಲ ತೇವ
ಕಣ್ಣ ಹನಿಯಲಿ ಬೆಂದು ಕರಗುವ ಸುಣ್ಣ
ಹೇಳಲಾರದ ತಾಳಲಾರದ ಹೆರಿಗೆ ನೋವು
ಹೃದಯ ಶಿವನ ಹಾಳು ಮಾಡಿದ ಸುಂದರ ಶಾಪ

ಶುಕ್ರವಾರ, ಜೂನ್ 10, 2011

ಎಲಾ ಹೊಟ್ಟೆಯೇ

ಮೊದಲು ತಿಳಿ ತಿಳಿ ಹಾಲು
ಕ್ರಮೇಣ ಕೆನೆ ಕೆನೆ ಮೊಸರು
ಇದೀಗ
ರೊಟ್ಟಿಯ ಮೇಲಿನ ತುಪ್ಪ
ಇದಕೂ ಮೊದಲು ಮಜ್ಜಿಗೆಯೊಳಗಿನ ಬೆಣ್ಣೆ
ಎಲ್ಲದಕೂ ಮುಂಚೆ ಆಕಳ ಕೆಚ್ಚಲ ಖಂಡದೊಳಗಿನ
ರಕ್ತ.

ತೆಪ್ಪಗಿಳಿಯುತ್ತಿದೆ ತುಪ್ಪ
ಅನ್ನನಾಳದಿಕ್ಕೆಲಗಳ ಸವರುತ ತುತ್ತಿನೊಂದಿಗೆ.

ದಿಢೀರ್ ಬಿಕ್ಕಳಿಕೆ:
ಕ್ಷೀರ ಸಂಶೋಧಕ ನೆನೆದನೋ
ಅನ್ನದುತ್ಪಾಕ ಬೈದನೋ-
ನನಗಂತು ನೀರ್ಲೋಟ ನೆನಪಾಯಿತು.

ಅದೇಕೋ
ಅನಾದಿ ಕಾಲದ ಕಿಡಿಯೊಂದು
ಕೆಂಡವಾಗಿ,ನಿಗಿನಿಗಿ
ಜ್ವಾಲೆಯಾಗಿ,ತುಪ್ಪಕಾಗಿ
ಕಾಯುತ್ತಿರುವಂತೆ ಜಠರದುದ್ದಗಲ ನಾಲಿಗೆ ಚಾಚಿ.

ಅದೆಷ್ಟು ಖಂಡುಗ
ಬತ್ತ,ರಾಗಿ ಬೆಂದು ಹೋದವೋ ನನ್ನ ಹೊಟ್ಟೆಯಲ್ಲಿ
ಅದೆಷ್ಟು ಸಮುದ್ರ
ಅದೆಷ್ಟು ಕಾಯಿ ಸೊಪ್ಪು,ಅದೆಷ್ಟು
ಕೊಪ್ಪರಿಗೆ ತುಪ್ಪದೊಡನೆ!

ಎಲಾ
ಹೊಟ್ಟೆಯೇ...

ಮಂಗಳವಾರ, ಜೂನ್ 7, 2011

ದಕ್ಕದ ತುತ್ತು

ಬಡವನುದರ ಬೆನ್ನಿಗೇರಿ ದೇಹ ಬರೀ ಚಕ್ಕಳ.
ನೋಡಬಹುದೆ ಅನ್ನವಿರದೆ ಸಾಯುತಿರುವ ಮಕ್ಕಳ.
ಹೊಟ್ಟೆ ಕಿಚ್ಚು ವ್ಯಾಪಿಸಿರಲು ಮಾನವತೆ ದಹಿಸಿದೆ
ಆರದಿದು ಎಷ್ಟೆ ಕಣ್ಣು ಅತ್ತರೂನು ಗಳಗಳ.
ಮಂದಿ ಮಂದಿ ಮುಕ್ಕಿ ತಿನುವ ದಾನವತೆನಿಲ್ಲಲಿ
ಒಂದೆ ಮನದಿ ಒರೆಸಬೇಕು ತೇವಗೊಂಡ ಕಂಗಳ.

ಮೂಟೆ ಮೂಟೆ ಕೊಳೆಯುತಿರಲು ಉಳ್ಳವರ ಮನೆಯಲಿ
ತಂಗಳನ್ನ ಕೂಡ ಕನಸು ದೀನರ ಗರಿಗೂಡಲಿ.
ಮುತ್ತು ರತ್ನ ಅಳೆದ ನಾಡು ನೋಡಿ ಈಗ ಹೇಗಿದೆ
ಸಾಮರಸ್ಯ ಸತ್ತು ಹೋಗಿ ತಾರತಮ್ಯ ಬೀಗಿದೆ.
ದರ್ಪ ದೌರ್ಜನ್ಯದ ವಿಷಸರ್ಪ ಹೆಡೆಯ ಹೆತ್ತಿದೆ
ಸಾವಿಗಂಜಿ ಬಡಸಮೂಹ ಗಂಜಿಗೆ ಹೋರಾಡಿದೆ.

ನೆಲವ ಸೀಳಿ ಬೀಜ ಬಿತ್ತಿ ಫಸಲು ಸಿಗದ ರೈತರು
ವಲಸೆ ಹೋಗಿ ನಗರಗಳಲಿ ಕೂಲಿಗಾಗಿ ಕಾದರು.
ಹಡೆದ ತಾಯಿ ಕೂಸಿಗಾಗಿ ಬಿಸಿಲಿನಲ್ಲಿ ದುಡಿದಳು
ಮೂಲೆಗಳಲ್ಲಿ ಹಾಲು ಇಲ್ಲ ಬೆವರ ಬುವಿಗೆ ಬಸಿದಳು.
ಅನ್ನ ಕೊಡದ ದೇವರೇಕೆ ಜನ್ಮ ಕೊಟ್ಟ ಕೇಳಿರಿ
ಕಲ್ಲು ಬಾಯ ತೆರೆವವರೆಗು ಕಣ್ಣು ಬಿಟ್ಟು ಕಾಯಿರಿ.

ನಿಲ್ಲದ ಸ್ವಗತ

ಈ ಶೈಶವ ಈ ಬಾಲ್ಯ ಈ ಹರೆಯ ಈ ಮುಪ್ಪು
ಈ ಹುಟ್ಟು ಸಾವ ನಡುವೆ
ಈ ಕಾಮ ಈ ಕ್ರೋಧ ಈ ಲೋಭ ಈ ಮೋಹ
ಮದ ಮತ್ಸರಗಳ ಗೊಡವೆ

ಕೋಶಗಳ ಓದಿದರು ದೇಶಗಳ ಸುತ್ತಿದರು
ಪ್ರಶ್ನೆಗೆ ಇಲ್ಲ ಜವಾಬು
ಇದು ಸತ್ಯ ಇದು ಮಿಥ್ಯ ಇದು ನೇರ ಇದು ವಕ್ರ
ಬರಿದೆ ಸುಳ್ಳು ಸಬೂಬು

ಹೊಸತಿನ ಹುಡುಕಾಟದ ಭ್ರಮೆ ಬಲಗೊಂಡು ಬೆಳೆದಿರಲು
ವಾಸ್ತವದ ನೆಲೆಯ ಮರೆತು
ಅದೆ ಚಲನೆ ಅದೆ ತುಲನೆ ಬಿಡದಂತೆ ಸೆಳೆದಿಹುದು
ಪೂರ್ವಿಕರ ಹೆಜ್ಜೆ ಗುರುತು

ಬಹುಪಾಲು ಬದುಕನ್ನು ಕಡುನಿದ್ದೆ ನುಂಗಿರಲು
ಉಳಿದದ್ದು ಜಡತೆ ಪಾಲು
ದುಡಿಯುವುದು ಉಣ್ಣುವುದು ಉಣ್ಣುವುದು ದುಡಿಯುವುದು
ಬೇಕೆ ಯಾಂತ್ರಿಕತೆಯ ಬಾಳು

ಕತ್ತಲೆಯ ಮೇರೆಗಳು ನಡೆದಷ್ಟು ವಿಸ್ತಾರ
ಎಲ್ಲಿರುವುದು ಹೊಸಬೆಳಕು
ಹೃದಯದ ಸದ್ಗುಹೆಯೊಳಗೆ ತಪಗೈವ ಪರಮಾತ್ಮ
ಮಾತಾಡು ಮೌನ ಸಾಕು

ಶನಿವಾರ, ಜೂನ್ 4, 2011

ಕೆದಕಿದಷ್ಟು ನೀರು ಮಲಿನ

ಜೀವಜೀವದಾಳದಲ್ಲು
ಸದ್ವಿಶಾಲ ಬಾನು
ಆಲದಲಿರುವಂತೆ ಹಲವು
ಬಿಳಲುಗಳ ಕಣ್ಣು

ಸತ್ಯ ಒಂದು ಕೋನ ನೂರು
ಗ್ರಹಿಕೆಗರ್ಥ ಬೇಡ
ಸೃಷ್ಟಿ ಎಂಬ ಮನೆಯ ತುಂಬ
ಜಿಜ್ಞಾಸೆಯ ಜೇಡ

ಸುಪ್ತ ಮನದ ಗುಪ್ತ ವಿಷಯ
ಪಾಚಿಯಡಿಯ ನೀರು
ಏಕೆ ಕೆಸರಿನುಸಾಬರಿ
ಹೂವಿಗೆ ಹೊಣೆ ಯಾರು

ಚಿತ್ತ ಭಿತ್ತಿ ಮೇಲನೇಕ
ಬಣ್ಣ ಬಣ್ಣ ಬಣ್ಣ
ತಿಕ್ಕಿ ನೋಡಿದಾಗ ಬಯಲು
ಬಣ್ಣದಡಿಯ ಸುಣ್ಣ

ಕೆದಕಿದಷ್ಟು ನೀರು ಮಲಿನ
ನೋಡು ಮಿನುಗು ಮೀನು
ಪ್ರಶ್ನೆಗಳಪಹಾಸ್ಯದೆದುರು
ನಾನು ನೀನು ಅವನು

ಶುಕ್ರವಾರ, ಜೂನ್ 3, 2011

ಅವಳ ಕನಸು

ನೆತ್ತಿಗೆ ರವಿ ಕೊಳ್ಳಿಯಿಡಲು
ಪಾದದಡಿಗೆ ಕಾದ ಮರಳು
ನಾನು ಮತ್ತು ನನ್ನ ನೆರಳು
ಸಾಗುತಿದ್ದೆವೆಲ್ಲಿಗೆ ?
ಅವನು ಯಾರೊ ಓಡಿ ಬಂದ
ಬೊಗಸೆ ತುಂಬ ನೀರು ತಂದ
ಮುಖಕೆ ಎರಚಿ ಕಾಣೆಯಾದ
ಹೆಸರಿಡಿ ಈ ನಂಟಿಗೆ !

ಅವನ ಹೆಜ್ಜೆ ಗುರುತು ಹಿಡಿದು
ನಡೆದೆವು ಹಂಬಲವ ತಳೆದು
ಕುಶಲ ಕಸುಬು ಕೇಳಲೆಂದು
ಹೊಸತು ಅರ್ಥ ಯಾತ್ರೆಗೆ !
ಸಾಗಿದಷ್ಟು ದಾರಿ ದೂರ
ಹೇಳಿ ಕೇಳಿ ಮಹಾ ಸಹರ
ಕೊನೆಗು ಸಿಗಲೆ ಇಲ್ಲ ಚತುರ
ಪರದೆ ಸರಿದ ಕನಸಿಗೆ !

ಬುಧವಾರ, ಜೂನ್ 1, 2011

ಹೆಣ್ಣು ಮತ್ತು ಬಟ್ಟೆ

ಲಜ್ಜೆಗೆಟ್ಟ ನಾಲಿಗೆಯಿಂದ
ದೂರಿದರೆ ನಿನ್ನ ಮೈಯಿಂದ
ಒಂದೆಳೆಯೂ ಬೇರ್ಪಡುವುದಿಲ್ಲ.ಕೊನೆಗೂ
ತಿಳಿಯಲಿಲ್ಲ ನಿನ್ನ ಲಿಂಗ.

ನೂಲಿಗೆ ನೂಲು,ಬಣ್ಣದ ಕಸೂತಿ-
ನಿನ್ನದು ಅಪ್ಪಟ ರಸಿಕನಪ್ಪುಗೆ
ಮೊಲೆಯಾದಿ ತೊಡೆ ನಿತಂಬ
ಬಳಸಿ ನಿಲ್ಲುವ ನೀನು ವಿಚಿತ್ರ ಸ್ಪರ್ಶಸುಖಿ.

ಪುಂಡರ,ತರುಣರ ಇಲ್ಲವೇ ಚಪಲಗಣ್ಣುಗಳಿಂದ
ತಪ್ಪಿಸಿಕೊಳ್ಳುವುದು ಸುಲಭ. ಮಾನ ಮುಚ್ಚಿಕೊಳ್ಳುವ ಯತ್ನದಲ್ಲಿ
ನಿನಗೆ ನಿತ್ಯ ಬೆತ್ತಲ ದರ್ಶನ-ನೋಟು ನೋಟು ಕೂಡಿಟ್ಟು
ಗೆದ್ದಲಿಗೆ ಉಣಬಡಿಸುವ ರೀತಿ.

ಅಕ್ಕಮಹಾದೇವಿ ನಾನಲ್ಲವೆಂದು ಬಲ್ಲೆ,ಗೇಣುದ್ದದೀ ಮುಡಿ
ಮುಚ್ಚದು ನನ್ನಿಡೀ ಮೈಯ.
ಕಿತ್ತು ಕಡ್ಡಿ ಗೀರಿ ಸುಟ್ಟರೂ ನೋಡುಗಣ್ಣ
ಕಲ್ಪನೆಯ ದೃಷ್ಟಿ ಎಂದಿಗೂ ಅನಂತ.

ಬಚ್ಚಲ ಹಬೆಯಲ್ಲಿ ರೋಮಾಂಚನಗೊಂಡ
ಅನುಭವವಿದೆ.ಬಿಸಿ ಬಿಂದು ಹಣೆಯಿಂದಿಳಿದು
ಮೂಗಿನ ತುದಿಯಾಚೆ ಧುಮುಕಿ ಹೊಕ್ಕಳವರೆಗೆ
ಜಾರುವುದ ಕಂಡಿದ್ದೇನೆ.
ಕ್ಷಣದಲ್ಲಿ ನನ್ನ ಆವರಿಸುವ ಈ ಬಟ್ಟೆ-
ನನ್ನುಬ್ಬು ತಗ್ಗುಗಳನ್ನು ಬಲ್ಲ ಮಹಾ ಮಾಂತ್ರಿಕ.

ಸೋಕಿದ ಮಾತ್ರಕ್ಕೆ ಸೋತೆನೆನ್ನದಿರು,ಮರೆತುಬಿಡು
ಆ ಬೆವರ ಕಮಟು ಸ್ವಾದವನ್ನ.
ಮಾತು ತಪ್ಪಿದರೆ,ಇದಂತೂ ನಿಜ,ನೀನು
ನನಗೆಸಗುವ ವಿಶ್ವಾಸ ದ್ರೋಹ.

ಲೋಕದೆದುರು
ಬೆತ್ತಲಾದರೂ ಚಿಂತೆಯಿಲ್ಲ ಕಡೆಗೆ.
ನಿನ್ನ ಕಣ್ಣುಗಳಿಗೆ ಸೂಜಿಯನ್ನು ಚುಚ್ಚಿ
ಸಂಪೂರ್ಣ ನೂಲು ನೂಲು ಮಾಡದಿರಲಾರೆ.

ಶನಿವಾರ, ಮೇ 21, 2011

ಬದುಕು ಹುಚ್ಚುಹೊಳೆಯು

ಬದುಕು ಹುಚ್ಚು ಹೊಳೆಯು
ಪ್ರೀತಿ ಸುಂದರ ಸುಳಿಯು
ಕನಸುಗಣ್ಣುಗಳಲ್ಲಿ ಉಪ್ಪು ಪನ್ನೀರು.
ಸಾವಿಗೆದುರಿನ ಯಾನ
ರೂಢಿಯಾಗಿಹುದಣ್ಣ
ಅವಳಿದ್ದ ಕಡೆಗಿರಲಿ ನಿತ್ಯ ಹೊಂದೇರು.

ಶವದ ಮೇಲಿನ ಹೂವು
ತರುವ ಪರಿಮಳ ಸೋಕೆ
ಎಂಥ ಮೈಲಿಗೆ ಹೇಳು ರುದ್ರ ಭೈರವಗೆ?
ಬೆಳ್ಳಿ ಬಟ್ಟಲಿನಲ್ಲಿ
ಕಳ್ಳಿ ಹಾಲನು ಕುಡಿಸಿ
ಹೋದ ಪ್ರೇಯಸಿ ಹೊಣೆಯೆ ಬೆಂದ ನನ್ನೆದೆಗೆ?

ನೀರು ಇಂಗದ ವಿನಃ
ತೀರ ಸೇರವು ಸನಿಹ
ಹಣ್ಣಾಗದಿರೆ ಹೆಣ್ಣು ಕಣ್ಣು ತೆರೆಯುವಳೆ?
ನೆತ್ತಿ ಮೇಲಿನ ಸಾಲು
ಉತ್ತರವ ಮರೆತಿರಲು
ಹೂತ ಭಾವನೆಗಳಿಗೆ ಎಲ್ಲಿ ಜೀವಕಳೆ?

ಗುರುವಾರ, ಮೇ 19, 2011

ಆದಿತ್ಯ ದರ್ಶನಂ

ಮುಗಿಲ ಗೋಪುರಗಳೆಡೆಯೊಳ್ ಥಳಥಳಿಸಿ ಮಿನುಗಿಸಿ ಅಗ್ನಿಜ್ವಾಲೆ
ಅದೆನಿತೆನಿತು ರೂಪಂಗಳೊoದಿಹೆ ಆವ ಉದರದೊಳು ಹುಟ್ಟಿ?
ಕ್ಷಣದೊಳ್ ಮುತ್ತಿಟ್ಟು ಹೊರಗಟ್ಟಿ ಧಗಧಗಿಪೆ ಹೇ ಜಗಜ್ಯೋತಿ
ಮುದ್ದಿಸಲಾಗಮಿಸಲೆನ್ನ ನೇತ್ರಗೊಂಬೆಯ ದಿಟ್ಟಿ !
ತುಸು ಸರಿದು ಮರೆಯಾಗಿ ಸರಿದೋಡಲು ಮುಗಿಲ ಸಾಲುಗಳ್
ರಸರೌದ್ರಗೆಂಡನಾದೊಡಮೇನ್
ದೆಸೆದೆಸೆಗಳ್ಗತ್ತಲೆಯನೆತ್ತಿ ನವಬೆಳಕ ಬೀರದಿರ್ದೊಡೆ ?
ಇಹುದೆನಗೆ ನಂಬುಗೆಯು ಆರೆಂಬುದು ನೀ-
ಭಾವಲೋಕದ ಭಾವಾಗ್ನಿಯೇ
ಬಾರೆನ್ನ ಮನದಿ ನೆಲೆಸು!

ಮಂಗಳವಾರ, ಮೇ 17, 2011

ಸಂಜೆಯಾಗುತಿದೆ

ಸಂಜೆಯಾಗುತಿದೆ ಹೊರಡು ಬೇಗನೆ
ಸಾಗಬೇಕು ದೂರ
ತವರು ಬೆಚ್ಚಗಿದೆ ಎಂದು ಕೂರದಿರು
ಸೇರಬೇಕು ಊರ

ಉಟ್ಟ ಸೀರೆಯಿದು ಒಪ್ಪುವಂತಿದೆ
ತೊಟ್ಟ ಬಳೆಯೆ ಸಾಕು
ಹೊತ್ತು ಮುಳುಗುತಿದೆ ಕತ್ತಲಾಗುತಿದೆ
ಬೆಟ್ಟ ಇಳಿಯಬೇಕು

ಬಿಸಿ ರವೆಯುಂಡೆ ಸಿಹಿ ಒಬ್ಬಟ್ಟು
ತುಪ್ಪ ಕರ್ಜಿಕಾಯಿ
ಹದವ ಮಾಡಿ ಕಟ್ಟಿಹಳು ಬುತ್ತಿ
ಪ್ರೀತಿ ಬೆರೆಸಿ ತಾಯಿ

ಹುಟ್ಟಿದಮನೆ ಅಲ್ಲ ಶಾಶ್ವತ
ಪತಿಯೆ ಸತಿಗೆ ಸೂರು
ಕೈಯ ಹಿಡಿದವನ ಬಾಳ ಜಾತ್ರೆಯಲಿ
ಮಡದಿ ತಾನೆ ತೇರು

ಮಂಗಳವಾರ, ಏಪ್ರಿಲ್ 26, 2011

ತ್ವರೆ ಮಾಡಿ

ಹುಟ್ಟು ಸಾವು
ಸೃಷ್ಟಿ ಲಯ
ಉದಯ ಅಸ್ತ -
ಇವುಗಳ ನಡುವೆ
ನಾನು ಮತ್ತು ಬದುಕು
ಪ್ರಶ್ನೆಗಳ
ಪಾತಾಳಕ್ಕಿಳಿದು
ಅಕ್ಷರಶಃ ಕಳೆದುಹೊಗಿದ್ದೇವೆ.
ಹುಡುಕಿ ಕೊಟ್ಟವರಿಗೆ
ನಮ್ಮಿಬ್ಬರನ್ನು
ಉಚಿತವಾಗಿ ಕೊಡಲಾಗುವುದು!

ಸೋಮವಾರ, ಏಪ್ರಿಲ್ 25, 2011

ಅವ್ವನಿಗೊಂದು ಜೋಗುಳ

ಹಾಸಿಗೆ ಹಾಸಿವ್ನಿ ಬೀಸಣಿಗೆ ತಂದಿವ್ನಿ
ಕೂಸಂಗೆ ಮಲಗು ಕಣ್ಮುಚ್ಚಿ /ನನ್ನವ್ವ
ಬ್ಯಾಸರಕೀ ನನ್ನ ಪದ ಕೇಳು //

ಗಂಭೀರದಲಿ ಆನೆ ಅಂಬಾರಿ ಹೊರುವಂಗೆ
ಒಂಭತ್ತು ತಿಂಗಾಳು ಹೊತ್ತೆನ್ನ /ತಿರುಗಾಡಿ
ತುಂಬಿದೂರಿಗೆ ತಂದು ನೀ ಬಿಟ್ಟೆ //

ನೆತ್ತಿ ಸುಡೊ ಬಿಸಿಲಾಗೆ ಸುತ್ತಿ ಸೆರಗ ತಲೆಗೆ
ಹೊತ್ತಾರಿಂದ ಸಂಜೆ ತನಕ /ನೀ ದುಡಿದು
ತುತ್ತುಣಿಸಿ ಮಲಗಿದೆ ನೀ ಹಸಿದು //

ಪೋಲಿ ಹೈಕಳ ಸಂಗ ಗೋಲಿ ಗೆಜ್ಜುಗ ಹಿಡಿದ
ಚಾಳಿಯ ಬಿಡಿಸಿ ಬುದ್ವಾದ /ನೀ ಹೇಳಿ
ಶಾಲೆಗಾಕಿ ಬೆಳಕ ತೋರಿಸಿದೆ //

ರೆಕ್ಕೆ ಬಲಿತ ಹಕ್ಕಿ ಸೊಕ್ಕಿ ಹಾರೋವಂಗೆ
ದಿಕ್ಕೆಟ್ಟು ಸುತ್ತಿ ಪರಪಂಚ /ಬಂದಿವ್ನಿ
ಮುಕ್ಕಾಗದ ಪ್ರೀತಿ ನಿನದೊಂದೆ //

ಮಂಗಳವಾರ, ಫೆಬ್ರವರಿ 15, 2011

ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಕಣ್ಣೀರಿಗೂ ಈ ಪ್ರೀತಿಗೂ ಬಿಡಿಸದಂತ ಋಣ
ಒಂದೇ ಸಮ ಗೋಳಾಡಿದೆ ಕಂಗಾಲಾಗಿ ಮನ
ಅದೇ ಕಿಚ್ಚು ಪದೇ ಪದೇ ಎದೆ ಸುಡುತಲಿದೆ
ಪ್ರತಿ ಸ್ವರ ಶೃತಿ ಮರೆತಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಕಣ್ಣ
ಬಿಂದು ನಿನ್ನ ಬಂಧು ದೂರಬೇಡ ಯಾರನು
ಹಣೆಯ ಮೇಲೆ ಬರೆದ ಸಾಲು ಅಳಿಸಲಾರ ಬ್ರಹ್ಮನು
ಒಲಿದ ಮನಸು ತಿಳಿದು ತಿಳಿದು ತೊರೆದರೇನು ನಿನ್ನನು
ಒಡೆದ ಕನ್ನಡಿಯಲಿ ಮುಖವ ನೋಡುವವನು ಮೂಢನು
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಉರಿಯುವ ಮುನ್ನ ಒಂಟಿದೀಪ ಗಾಳಿಪಾಲು ಎಲ್ಲಿ ಬೆಳಕು
ಅರಳುವ ಮುನ್ನ ಪ್ರೀತಿ ಹೂವು ಮಣ್ಣುಪಾಲು ಎಲ್ಲಿ ಬದುಕು
ಬದುಕಿನ ಪ್ರಯಾಣಕೆ ಬಗೆಬಗೆ ತಿರುವಿದೆ
ಒಲವಿನ ಸಮಾಧಿಗೆ ಅವಳದೆ ಹೆಸರಿದೆ
ವ್ಯಥೆ ನನ್ನ ಜೊತೆ ಸಾಗಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಕೊಳಲನಾದ ಎಂದು ಕೂಡ ಕೊಳಲ ಸ್ವತ್ತು ಆಗದು
ಕರಗಿ ಹೋದ ಹಿಮವ ನೆನೆದು ಗರಿಕೆ ಸೊರಗಬಾರದು
ಗೂಡು ಮರೆತು ಹೋದ ಹಕ್ಕಿ ಮರಳಿ ತವರ ಬಯಸದು
ಕಾಲದೆದುರು ವಾದಕಿಳಿದು ಮೂರ್ಖರಾಗಬಾರದು
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಮೊದಲನೆ ಹೆಜ್ಜೆಯಲ್ಲೆ ಯಾತ್ರೆ ಮುಗಿದು ಹೋದ್ರೆ ಮುಂದೆ ಏನು
ರಥವಿರದೇನೆ ಬಾಳಜಾತ್ರೆ ನಡೆದು ಹೋದ್ರೆ ಪಾಪಿ ನೀನು
ದೇವರ ತಮಾಷೆಗೆ ಬಲಿಪಶು ಮಾನವ
ಕಂಬನಿ ಪ್ರವಾಹದಿ ಮುಳುಗಿದೆ ವಾಸ್ತವ
ಭ್ರಮೆ ನನ್ನ ಕ್ಷಮೆ ಕೇಳಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ



ಶುಕ್ರವಾರ, ಫೆಬ್ರವರಿ 4, 2011

ನನ್ನ ಹಾಡು ನನ್ನದಲ್ಲ

ಹೆಣ್ಣಿನಿಂದ ಜನ್ಮ ಪಡೆದು
ಮಣ್ಣಿನಿಂದ ಅನ್ನ ಬಗೆದು
ಹೊನ್ನ ಗಳಿಸಿ ತನ್ನ ತೊರೆದು
ಬಣ್ಣದ ಮುಖವಾಡ ತೊಟ್ಟ ಅಣ್ಣಗಳಿರ ಕೇಳಿರಿ
ನನ್ನ ಹಾಡು ನನ್ನದಲ್ಲ ನಿಮ್ಮದೆಂದು ಹಾಡಿರಿ

ಹಡೆದವ್ವ ನಡೆವ ಘಳಿಗೆ
ಹಿಡಿ ಅನ್ನವ ಕೊಡದೆ ಕಡೆಗೆ
ಸುಡುಗಾಡಿನ ಕುಡಿ ದೀಪಗೆ
ವಡೆ ಮಾಡಿ ಎಡೆ ಇಡುವ ತಮ್ಮಗಳಿರ ಕೇಳಿರಿ
ನನ್ನ ಹಾಡು ನನ್ನದಲ್ಲ ನಿಮ್ಮದೆಂದು ಹಾಡಿರಿ

ಬಲ್ಲೆನೆಂಬ ಸುಳ್ಳು ಭ್ರಮೆಯ
ಕಳ್ಳ ಚೇಳು ಹೊಕ್ಕಿ ಹೃದಯ
ಮುಳ್ಳ ಚುಚ್ಚಿ ಕೊಲ್ಲೊ ವಿಷಯ
ಎಳ್ಳಿನಷ್ಟು ತಿಳಿಯದಂಥ ಅಯ್ಯಗಳಿರ ಕೇಳಿರಿ
ನನ್ನ ಹಾಡು ನನ್ನದಲ್ಲ ನಿಮ್ಮದೆಂದು ಹಾಡಿರಿ

ಬುಧವಾರ, ಫೆಬ್ರವರಿ 2, 2011

ನಲ್ಲಿಯ ದಾಹ

ಜಿನುಗದ ಹನಿಯ ಉಪಕಾರ ಸ್ಮರಿಸಿ
ಪುನರುತ್ಥಾನದ ತುಡಿತದಲ್ಲಿದೆ
ಬಾಯ್ತುಂಬ ಬಲೆಯೆಣೆದ ಜೇಡ.

ಬೆಂಕಿಮುಖಿಯಾಗಿ
ಪ್ರಸವದ ಸಿದ್ಧತೆಯಲ್ಲಿದೆ
ಪುಟಿವ ಹಠ ಬಿಟ್ಟ ನೆಲದಾಳದುದಕ.

ಸಂಪಿಗೆಯ ಮೂಗುರಿಸಿ
ಬೆಟ್ಟದ ಹುಲ್ಲಿಗೆ ಬೆರಳ ಸೋಕಿಸುತಿದೆ
ಅಪರಾಹ್ನದ ಅಪರಿಚಿತ ಬಿಸಿಗಾಳಿ.

ಹಿತ್ತಿಲ
ಸೀಬೆ ಗಿಡದಡಿ
ಬಕ್ಕರೆಯ ಚೂರುಗಳಾಗಿ ಬಿದ್ದಿದೆ
ಬಾಯಾರಿ ಬಲಿಯಾದ
ಸೂತಕದ ಮಡಿಕೆ.

ಇಂದು ನಲ್ಲಿಗೆ ದಾಹ.

ಶನಿವಾರ, ಜನವರಿ 22, 2011

ಬೆಳಕಿಗೂ ಕಣ್ಣುಗಳಿರಬಹುದು

ಬೆಳಕಿಗೂ ಕಣ್ಣುಗಳಿರಬಹುದು
ಏನಾದರೂ ನೋಡಲಿ
ಕತ್ತಲ ಸಂಧಿಸುವ ರಸಘಳಿಗೆ,ಸೂರ್ಯನ
ನಿದ್ರಾವಸ್ಥೆಯ ಅರೆಬೆತ್ತಲೆ
ನೋಡಲಿ ಬಿಡಿ.ಚರ್ಮದಿಂದೊಳದೂರಲಿ
ಕ್ಷ-ಕಿರಣ
ವಿಸ್ಮಯದ ವಿಕಿರಣ.ಮಂಜುಗಣ್ಣಿನ ಹೊರಪೊರೆ
ಸಂಜೆ ಬಾನಿನ ಬಣ್ಣದ ಮುಗಿಲು
ಸೌದೆ ಹೊರೆ ಹೊತ್ತ ಲಂಬಾಣಿ ಬೆಡಗಿಯ ಹಣೆಬೆವರು
ಮಿಲನದ ಏದುಸಿರು
ಕವನದ ತಂಬೆಲರು,
ನೋಡಲಿ ಬಿಡಿ ಬಸುರಿಯ ವೇದನೆ
ವಾಯ್ದೆ ಮೀರಿಯೂ ಬದುಕುಳಿದ ಕ್ಯಾನ್ಸರ್ ರೋಗಿಯ ನಿರುಮ್ಮಳತೆ.

ಬೆಳಕಿಗೂ ಕಣ್ಣುಗಳಿರಬಹುದು
ಎಲ್ಲಾದರೂ ಹರಿಯಲಿ
ಸುಳ್ಳನ ಇರಿಯುವ ಪಶ್ಚಾತಾಪ
ಕಳ್ಳನ ತುತ್ತಿನ ವ್ಯಂಗ್ಯ
ಪತ್ರೆ ಸೇದಿ ಮೂರ್ಛೆ ಹೋದ ಸಾಧುವಿನ ಸುಪ್ತ ಮನಸು,
ನೋಡಲಿ ಬಿಡಿ
ಸೂಳೆಯ ಸೆಂಟಿನ ಗುಟ್ಟು
ರಸಿಕನೊಬ್ಬನ ನೀರು ಬಿದ್ದ ಪ್ರೇಮಪತ್ರ
ತುಕ್ಕು ಹಿಡಿದ ವೀಣೆಯ ತಂತಿ
ಉಸಿರಾಡದ ಹಾರ್ಮೋನಿಯಂ
ಹೆಸರುಗೆಟ್ಟ ಸಾಧ್ವಿ ಹೆಂಗಸಿನ ಆತ್ಮಹತ್ಯೆ.

ಬೆಳಕಿಗೂ ಕಣ್ಣುಗಳಿರಬಹುದು
ಎಂದಾದರೂ ಮುಚ್ಚಲಿ
ಪ್ರವಾಹ ಉಕ್ಕಿದಾಗ
ಸಮುದ್ರ ಬತ್ತಿದಾಗ
ಕನಸು ಸತ್ತು ಕುರುಡಾಗಿ
ಕತ್ತಲ ಕಪಾಟಿನಲ್ಲಿ ಕಿರಣ ಕಾಲ್ಚಾಚಿದಾಗ.
ಮುಚ್ಚಲಿ ಬಿಡಿ ಹುಚ್ಚನ ಸ್ವಚ್ಚಂದ ನೋಟಕ್ಕೆ ಮಂಕು ಕವಿದು
ಕವಿಯ ಲೇಖನಿ ನಿದ್ರಿಸಿದಾಗ
ಯೋಧನ ಗುಂಡಿಗೆ ನಡುಗಿದಾಗ
ಸತ್ಯವಂತನಾಗಿ
ಕೋಗಿಲೆ ಸ್ವಂತ ಗೂಡು ಕಟ್ಟಿದಾಗ,ನೇಗಿಲು ಸವೆದು
ರಾಗಿ ನಿರ್ಜೀವಿಯಾದಾಗ
ಮುದುಕಿ ಮೈ ನೆರೆದಾಗ
ಗಾಂಧಿ ಮರೆತ ಭಾರತೀಯ ತ್ರಿವರ್ಣ ಧ್ವಜ ಹಾರಿಸಿದಾಗ !