ಶನಿವಾರ, ಸೆಪ್ಟೆಂಬರ್ 21, 2013

ಮಾತಾಡು ಚಪ್ಪಲಿಯೇ, ಏಕೀ ಮೌನ?

ಮಾತಾಡು ಚಪ್ಪಲಿಯೇ, ಏಕೀ ಮೌನ?
ಹೊಸ್ತಿಲಿನಾಚೆಗಿನ ಕತ್ತಲಲ್ಲಿ ಕಣ್ಮಿಟುಕಿಸುತ
ಉಂಗುಷ್ಟದಲ್ಲೇಕೆ ನಿಟ್ಟುಸಿರು ಬಿಡುವೆ ಹೇಳು.
ಬಿದ್ದ ಮಳೆಗೆ ದಾರಿಯ ಧೂಳು ಒದ್ದೆಯಾಗಿದ್ದಕ್ಕೆ?
ಒಡೆದ ಹಿಮ್ಮಡಿ ನಿನ್ನ ಹೆಗಲ
ಸವೆಸಿದ್ದಕ್ಕೆ ಇಷ್ಟೊಂದು ಹಠವೇ?
ಮೊನ್ನೆ ಹಸಿರ್ಗಾಲದಲ್ಲಿ ಕಣ್ಬಿಟ್ಟ
ಬೇಲಿ ಹೂ ಮುಡಿವವರಿಲ್ಲದೆ ಮಡಿದು
ಅನಾಥವಾಯಿತೆಂದು ಕಣ್ಣೀರಿಡುತ್ತಿರುವೆಯಾ
ಅಥವ ಮಣ್ಣಲ್ಲಿ ಬಿದ್ದು ಹೊರಳಾಡಿದ
ಅದರ ಶವ ತುಳಿದುಬಿಟ್ಟೆನಲ್ಲ
ಎಂಬ ಪಶ್ಚಾತಾಪವೇ? ತಪ್ಪು ನಿನ್ನದಲ್ಲ ಬಿಡು.

ನೀನು ಯಾವ ಪ್ರಾಣಿಯ
ಚರ್ಮ? ಪಾಪ ನಿನಗೇನು ಗೊತ್ತು.
ಹೊದ್ದು ನಿನ್ನನ್ನು ತಿರುಗಾಡುತ್ತಿದ್ದ ಅದನ್ನು
ಕೊಂದು ನಿನಗೀರೂಪ ಕೊಟ್ಟರು ಈ ನಾಗರೀಕರು
ತಮ್ಮ ತೆವಲಿಗಾಗಿ.
ಮೈ ತುಂಬ ಮೊಳೆ ಜಡಿಸಿಕೊಂಡರೂ
ನೀನು ಮುಟ್ಟಾದ ಹೆಂಗಸಿನಂತಾದೆ ಎನ್ನುವ ಕೊರಗೆ?

ನಿನಗೆ ಮಾತು ಬರುವುದಿಲ್ಲ-ಅದು
ನಿನ್ನ ದುರ್ದೈವ; ಮೆಟ್ಟಿ ನುಗ್ಗುವವನ ಕಳ್ಳದಾರಿ,
ಸೂಳೆಗೇರಿ,ಮದ್ಯದಂಗಡಿಯ ಗಬ್ಬಿನಲ್ಲಿ
ಕಾದು ಕಾದು ನಿತ್ರಾಣಗೊಂಡ
ನೀನಿಂದು ವಿಶ್ರಾಂತಿ ಪಡೆಯುತ್ತಿರುವೆಯಾ
ಅಥವ ಪಾಳಿಯಿಲ್ಲದ ದುಡಿಮೆಗಾಗಿ
ಕೂಲಿ ಕೇಳಲು ಕಾದಿರುವೆಯಾ?

ಹೇಳು ಪಾದಗಳ ಪಲ್ಲಕ್ಕಿಯೇ.
ನೀನು ಚಪ್ಪಲಿಯೋ,ಚಕ್ಕಳವೋ,ಕಾಲದ ರುಜುವೋ?

ಬುಧವಾರ, ಡಿಸೆಂಬರ್ 12, 2012

ಸಿದ್ದಕ್ಕ ಮತ್ತು ಪಾರಕ್ಕ

ಸಿದ್ದಕ್ಕ : ಪರ್ವಾಗಿಲ್ಲ ಪಾರಕ್ಕ
ಕ್ವಾಣೆ ವಳಕ್ ಬಾರಕ್ಕ
ನಾವೂನು ನಿಮ್ ಜನಾನೆ !

ಪಾರಕ್ಕ: ನೀ ಸುಮ್ಮನಿರು ಸಿದ್ದಕ್ಕ
ಗಮ್ಮನ್ನೋದೇನಕ್ಕ
ಏನ್ ಅಡುಗ್ಯೋ ಏನೋ ಕಾಣೆ !

ಸಿದ್ದಕ್ಕ : ಉಳ್ಳೀ ಕಾಳುರ್ದಿವ್ನಿ
ಮೆಣಸೇ ಕಾಯರ್ದಿವ್ನಿ
ಇಟ್ನೆಸ್ರೂದು ಮಡ್ಕೆ ಮಡಗಿವ್ನಿ
ನಿಮ್ಮಟ್ಟಿಲ್ ಏನೆಸ್ರು ಯೋಳು ನೀ ?

ಪಾರಕ್ಕ: ಗದ್ದೆ ಏರಿ ಮ್ಯಾಲೆ
ಇದ್ದ ಅಣ್ಣೆ ಸೊಪ್ಪು
ಎರ್ಡೇ ಎರಡೀರುಳ್ಳಿ ಎರಡಳ್ಳುಪ್ಪು
ಇದ್ದುದ್ದೇ ಬಕ್ಕ ನಾ ಏನೇಳ್ಳಿ !

ಸಿದ್ದಕ್ಕ : ನಾಟಿ ಮಾಡೋರ್ಗೆಲ್ಲ
ನಾಟಿ ಕೋಳಿ ಸಾರು
ಕಟ್ಕೊಂಡೆಡ್ತೀಗೆ ಸಪ್ಪೆ ಸಾರು,
ಕಬ್ಬು ಕಡಿಯೋರ್ಗೆಲ್ಲ
ಕೊಬ್ಬಿದ್ ಕುರಿ ಸಾರು
ಬೇಯ್ಸಾಕೋ ನಂಗೆ ಬಸ್ಸಾರು,
ನನ್ ಗಂಡ ಊರ್ ಮುಂದೆ ದ್ವಾಡ್ ಮನ್ಸ
ಅರ್ತ ಮಾಡ್ಕೋಡಿದ್ರು ನನ್ ಮನ್ಸ !

ಪಾರಕ್ಕ : ಬತ್ತ ಬಡಿಯೋರ್ಗೆಲ್ಲ
ಬಿಟ್ಟಿ ಒಬ್ಬಿಟ್ಟು
ತಟ್ಟೋ ನಂಗೆ ಮಾತ್ರ ತಂಗ್ಳಿಟ್ಟು,
ರಾಗಿ ಬಿತ್ತೋರ್ಗೆಲ್ಲ
ಚಟ್ನಿ ಉಳಿಯನ್ನ
ರುಬ್ಬೋ ನಂಗೆ ಮೀಸ್ಲು ಅಳಸ್ಲನ್ನ,
ನನ್ ಗಂಡ ಊರ್ ಮುಂದೆ ದ್ವಾಡ್ ಮನ್ಸ
ಯೋಳ್ಕೋಳಾಕವ್ನೊಬ್ಬ ನರ್ ಮನ್ಸ !

ಸಿದ್ದಕ್ಕ : ಉಗಾದಿ ಅಬ್ಬುಕ್ಕೆ
ರವ್ಕೆ ಇಲ್ದಿದ್ರೂ
ಊರುನ್ ಮಾರಮ್ಮಂಗೆ ಸೀರೆ ಕೊಟ್ಟ
ನನ್ ಗಂಡ ಊರ್ ಮುಂದೆ ದ್ವಾಡ್ ಮನ್ಸ !

ಪಾರಕ್ಕ : ಅರ್ದೀರೋ ಚೆಡ್ದೀಗೆ
ವಲ್ಗೆ ಇಲ್ದಿದ್ರೂ ಕೆರೆ ಕಟ್ಟೋರ್ಗೆ ಕಾಸು ಕೊಟ್ಟ
ಅರ್ತ ಮಾಡ್ಕೋಡಿದ್ರು ನನ್ ಮನ್ಸ!

ಸಿದ್ದಕ್ಕ : ಪರ್ವಾಗಿಲ್ಲ ಪಾರಕ್ಕ
ಕ್ವಾಣೆ ವಳಕ್ ಬಾರಕ್ಕ
ಈ ಬಾಳಾಟ ಇಷ್ಟೇ ತಾನೆ !

ಪಾರಕ್ಕ:ನೀ ಸುಮ್ಮನಿರು ಸಿದ್ದಕ್ಕ
ನಾವೇನ್ ನಾಲಾಯಕ್ಕ
ಹೆಣ್ಣಿದ್ರೆ ಗಂಡು ತಾನೆ !

ಬುಧವಾರ, ಮಾರ್ಚ್ 28, 2012

ರತ್ನನ ಪರ್ಪಂಚದಲ್ಲಿ ಉಪ್ಪಿ ಚಪ್ಪರಿಸಿದ ಉಪ್ಗಂಜಿ

'ರಾಜರತ್ನಂ ಬೀದಿಯಲ್ಲಿ ಅಡ್ಡಾಡುತ್ತಾ ....'

ಟಿ.ಪಿ. ಕೈಲಾಸಂ ಗ್ರಾಮೀಯ ಭಾಷೆಯನ್ನು ನಾಟಕಗಳಲ್ಲಿ ತಂದರೆ ಜಿ.ಪಿ. ರಾಜರತ್ನಂ ರವರು ಕಾವ್ಯಕ್ಕೆ ತಂದವರು. ಬಡತನದಲ್ಲಿ ಹುಟ್ಟಿ ಬೆಳೆದು ವಿದ್ಯಾಭ್ಯಾಸಕ್ಕಾಗಿ ಪಡಬಾರದ ಕಷ್ಟಪಟ್ಟು ಸಾಂಸರಿಕ ಕಷ್ಟಗಳ ನಡುವೆಯೇ ಆಶಾವಾದಿತ್ವ ಸಾರುವ ರತ್ನನ ಪದಗಳು ರಚಿಸಿದ ರಾಜರತ್ನಂ ೧೯೦೮ ರಲ್ಲಿ ಮೈಸೂರಿನಲ್ಲಿ ಜನಿಸಿ ೧೯೩೮ ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ಇವರು ೧೯೩೯ ರಲ್ಲಿ ತೀರಿಕೊಂಡರು. ಶಾಂತಿ ಮೊದಲಾದ ಗ್ರಂಥಸ್ಥ ಭಾಷೆಯ ರೀತಿ ರಚನೆಗಳಿಂದ ಹೊರಬಂದು ಬೇಂದ್ರೆಯವರಂತೆ ಗ್ರಾಮೀಣ ಸೊಗಡಿನ ಸ್ಪರ್ಶದೊಂದಿಗೆ ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ರಾಜರತ್ನಂ ರಚಿಸಿದ 'ಯೆಂಡ್ಕುಡ್ಕ ರತ್ನ' ಮೂಡಿ ಬಂದಿದ್ದು ೧೯೩೨-೧೯೩೪ ರ ನಡುವಿನ ಕಾಲ ಘಟ್ಟದಲ್ಲಿ. ಮುಂದೆ ನಾಗನ ಪದಗಳನ್ನು ಬರೆದರು.

ವಿಪರ್ಯಾಸವೆಂದರೆ ಕನ್ನಡ ಜನ ಮಾನಸದಲ್ಲಿ ಬೇರು ಬಿಟ್ಟಿರುವ ಯೆಂಡ್ಕುಡ್ಕ ರತ್ನ(ರತ್ನನ ಪದಗಳು)ಕ್ಕೆ ಯಾರೂ ಪ್ರಕಾಶಕರೇ ಕಾಣಿಸಲಿಲ್ಲವಂತೆ. ಪ್ರಕಟಣೆಗೆ ತಗಲುವ ಖರ್ಚು ಸುಮಾರು ೩೫ ರೂಪಾಯಿ. ೩೫ ಆಣೆ ಕೂಡಾ ಇರಲಿಲ್ಲವಂತೆ ರತ್ನನ ಹತ್ತಿರ. ಹಿಂದಿನ ವರ್ಷ ತನ್ನ ಒಂದು ಕವನಕ್ಕೆ ಬಂದಿದ್ದ ಶ್ರೀ ಅವರ ಚಿನ್ನದ ಪದಕವನ್ನು ಹೆಂಡತಿಗೆ ರತ್ನ ಕೊಟ್ಟುಬಿಟ್ಟಿದ್ದರು. ಪುಸ್ತಕ ಪ್ರಕಟಿಸಬೇಕೆಂಬ ಇಚ್ಛೆಯಿಂದ ಸಂಕೋಚವಿಲ್ಲದೆ ಹೆಂಡತಿಯನ್ನು ಕೇಳಿದಾಗ - ಇಂತಹ ಪದಕಗಳನ್ನು ಮಾಡಿಸಿಕೊಡುವುದಕ್ಕೆ ನೀವೇ ಇರುವಾಗ, ನಿಮಗೆ ಕೊಡುವುದಕ್ಕೆ ನನಗೇನು ಕಷ್ಟ? ಅಂತಹ ನಿಸೂರಾಗಿ ಕೊಟ್ಟೇ ಬಿಟ್ಟರಂತೆ ಮಹಾರಾಯ್ತಿ! ಆಕೆ ಕೊಟ್ಟ ಶುಭ ಗಳಿಗೆ, ಆ ಕೊಟ್ಟ ಮಂಗಳದ ಮನಸು, ಒಟ್ಟಿನಲ್ಲಿ ಪುಸ್ತಕ ಪ್ರಕಟವಾಯಿತು.ಮುಂದೆ ಇನ್ನೂ ಬೆಳೆಯಿತು. ಆಕೆ ಕಣ್ಮರೆಯಾಗಿ, ರತ್ನನೂ ಕಣ್ಮರೆಯಾಗಿ ಹೋಗಿದ್ದರೂ ಪದಕದ ಸಹಾಯದಿಂದ ಪ್ರಕಟವಾದ 'ಯೆಂಡ್ಕುಡ್ಕ ರತ್ನ' ಬೆಳೆದು 'ರತ್ನನ ಪದಗಳು' ಆಗಿ ಆ ಪುಸ್ತಕ ಇನ್ನೂ ಜೀವಂತವಾಗಿದೆ.

ಪದಕವನ್ನು ಮಾರಬೇಕೆಂದು ಗೊತ್ತಿದ್ದ ಒಬ್ಬರು ಶೆಟ್ಟರ ಹತ್ತಿರ ರತ್ನ ಹೋದಾಗ, ಅವರು ಏಕೆ, ಏನು, ಏತ್ತ ಎಂದೆಲ್ಲಾ ವಿಚಾರಿಸಿದರು. ಪದಕವನ್ನು ಅಂಗೈಯಲ್ಲಿ ತೂಕ ಹಾಕಿ - ರಾಜಾ, ಇದನ್ನ ಮಾರಬೇಡ, ಮಾರಿ ಕಳಕೋಬೇಡ. ಕಳಕೊಂಡು ಆಮೇಲೆ ಕೊರಗಬೇಡ. ನಿನ್ನ ಪುಸ್ತಕ ಪ್ರಕಟಿಸೋಕೆ ನಿನಗೆ ೩೫ ರೂಪಾಯಿ ಬೇಕು ತಾನೆ? ಕೊಡುತ್ತೇನೆ, ತೆಗೆದುಕೊ, ಪದಕ ನನ್ನ ಹತ್ತಿರ ಇರಲಿ. ನಿನಗೆ ಯಾವಾಗ ಆಗುತ್ತೋ ಆವಾಗ ನನ್ನ ೩೫ ನನಗೆ ಕೊಟ್ಟು ನಿನ್ನ ಪದಕ ತೆಗೆದುಕೊಂಡು ಹೋಗು ಎಂದರು

ಪದಕ ಅವರ ಹತ್ತಿರ ಉಳಿತು, ರತ್ನನಿಗೆ ೩೫ ಸಿಕ್ಕಿತು. ಸಾವಿರ ಪ್ರತಿ 'ಯೆಂಡ್ಕುಡ್ಕ ರತ್ನ' ಪ್ರಕಟವಾಯಿತು. ಸ್ವಂತಕ್ಕೆ ಕೆಲವು ಪ್ರತಿಗಳನ್ನು ಇಟ್ಟುಕೊಂಡು ಉಳಿದದ್ದನ್ನ ಮಾರಿದರು. ಮೈಸೂರಿನ ಪ್ರೋಗ್ರೆಸ್ ಬುಕ್ ಸ್ಟಾಲಿನವರು, ಬೆಂಗಳೂರು ರಾಮ ಮೋಹನ ಕಂಪೆನಿಯವರೂ ಆ ಪ್ರತಿಗಳನ್ನು ಒಂದಾಣೆಗೊಂದರಂತೆ ಕೊಂಡುಕೊಂಡರು. ಮಾರಿ ನಗದು ಹಣದಲ್ಲಿ ಶ್ರೇಷ್ಠಿ ಮಿತ್ರರಿಗೆ ಅವರ ೩೫ ತಲುಪಿಸಿ ರತ್ನ ತನ್ನ ಪದಕವನ್ನು ಹಿಂದಕ್ಕೆ ಪಡೆದರು. ಯೆಂಡ್ಕುಡ್ಕ ರತ್ನ ದ ಪ್ರಕಟಣೆ ಕೊಟ್ಟ ಲಾಭಾಂಶದಿಂದ ವಿವೇಕನಂದರ ಭಾಷಣಗಳು ಮತ್ತು ಲೇಖನಗಳ ಏಳು ಸಂಪುಟಗಳನ್ನು ರತ್ನ ಕೊಂಡುಕೊಂಡರು. ರಾಜರತ್ನಂ ಅವರೇ ಹೇಳುವ ಪ್ರಕಾರ ಪುಸ್ತಕದಲ್ಲಿ ಅಲ್ಲಲ್ಲಿ ಅರ್ಧ ಅಕ್ಷರ ಬರುತ್ತೆ. ಪದಾನ ಅಲ್ಲಿಗೇ ನಿಲ್ಲಿಸದೆ, ಮುಂದಿನ ಪೂರ್ಣಾಕ್ಷರಾನೂ ಕೂಡಿಸಿಕೊಂಡರೆ, ಪದ್ಯ, ಇಳಿಜಾರಿನಲ್ಲಿ ನೀರು ಹರಿದಹಾಗೆ ಹರೀತ್ತದೆ; ಇಲ್ಲದೆ ಹೋದರೆ, ಬಟ್ಟೆ, ಕಾಗದ, ಹರಿದಹಾಗೆ ಹರೀತ್ತದೆ ಇದನ್ನು ಗಮನದಲ್ಲಿಟ್ಟುಕೊಂಡು ನಾವು ಓದಬೇಕಾಗುತ್ತದೆ.

ಬಡತನದ ಬೆಂಕಿಯಲ್ಲೇ ಅರಳಿದ ರತ್ನನ ಪದಗಳು ಎಂಬ ಹೂಗಳ ಪರಿಮಳ ಇಂದಿಗೂ ಇದೆ. ಅವುಗಳಲ್ಲಿನ ಒಂದು ಹೂವೇ 'ರತ್ನನ್ ಪರ್ಪಂಚ'. ಈ ಹಾಡು ಉಪೇಂದ್ರರವರು ನಿರ್ದೇಶಿಸಿ, ನಟಿಸಿದ 'ಎ' ಚಿತ್ರದಲ್ಲಿ ಗುರುಕಿರಣ್‌ರವರ ಸಂಗೀತದಲ್ಲಿ ಎಲ್.ಎನ್. ಶಾಸ್ತ್ರಿ ರವರ ಧ್ವನಿಯಲ್ಲಿ ಚಿತ್ರಗೀತೆಯಾಗಿರುವುದು ಹರ್ಷದಾಯಕ ಸಂಗತಿ.

'ಉಪ್ಪಿಗಿಂತ ರುಚಿ ಬೇರೆ ಇಲ್ಲ'

ಉಪೇಂದ್ರರ ಮೂಲಕ ಕನ್ನಡ ಚಲನಚಿತ್ರ ನೌಕೆಯ ದಿಕ್ಕು ಬದಲಾಯಿತು. ಕತೆ, ಚಿತ್ರಕತೆ, ಸಂಭಾಷಣೆಯ ವಿಚಾರದಲ್ಲಿ ಹೊಸ ಆಯಾಮ ಸೃಷ್ಟಿಸಿದ ಇವರು ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಮಾತಿನ ವಿರುದ್ಧ ದಿಕ್ಕು ಹಿಡಿದರೆಂದು ಹೇಳಬಹುದು. ಅದೇ ಅವರ ಕ್ರಿಯಾಶೀಲತೆ, ಜನಮನ್ನಣೆ, ಆಸ್ತಿತ್ವ ಎಲ್ಲಕ್ಕೂ ಅಡಿಗಲ್ಲಾಯಿತು. ಹೆಚ್ಚುಕಮ್ಮಿ ಒಂದು ದಶಕದಷ್ಟು ಕಾಲ ಉಪೇಂದ್ರ ಮೇನಿಯಾಕ್ಕೆ ಒಳಗಾಗದ ಯುವಕರೇ ಇರಲಿಲ್ಲ ಎನ್ನಬಹುದು. ಅವರು ಸೃಷ್ಟಿಸುತ್ತಿದ್ದಂತಹ ಪಾತ್ರಗಳು ಕೇವಲ ಪಾತ್ರಗಳಾಗಿರದೆ ವಾಸ್ತವಕ್ಕೆ ಹತ್ತಿರವಾಗಿದ್ದುಕೊಂಡು ಮಧ್ಯಮ, ಕೆಳವರ್ಗದ ಯುವ ಮನಸ್ಸಿನ ಆಕ್ರೋಶ, ಅಸಹಾಯಕತೆ, ಖಿನ್ನತೆ, ಹೋರಾಟದ ಛಲ, ದೌರ್ಜನ್ಯಕ್ಕೊಳಗಾದ ಹತಾಶೆ, ಸಮಾಜದ ಅನಾಗರಿಕತೆ, ಹಮ್ಮು-ಬಿಮ್ಮು, ಜಂಭ-ದರ್ಪಗಳನ್ನು ದಿಕ್ಕರಿಸಿ ನಿಲ್ಲುವ ಹಪಾಹಪಿ ಎದ್ದು ಕಾಣುತ್ತಿತ್ತು.

ಮೂಲತಃ ನಿರ್ದೇಶಕರಾಗಿದ್ದ ಉಪೇಂದ್ರ ತಾವು ಚೊಚ್ಚಲ ಬಾರಿಗೆ ತಮ್ಮದೇ ನಿರ್ದೇಶನದಲ್ಲಿ ನಾಯಕ ನಟರಾಗಿ ಭಡ್ತಿ ಪಡೆದುಕೊಂಡ ಚಿತ್ರ ಎ. ಎ ಚಿತ್ರದ ಪಾತ್ರ ಉಪೇಂದ್ರರ ನೇರ ಧೋರಣೆ, ದಿಟ್ಟ ಪ್ರತಿಭಟನೆ, ಹಕ್ಕು ಚಲಾವಣೆ ಎಂಬಿತ್ಯಾದಿ ವಿಷಯಗಳಲ್ಲಿ ಮಾತ್ರ ಕಳೆದು ಹೋಗದೆ ನಾಯಕ ತನ್ನ ಹಸಿ ಹಸಿ ಪ್ರೀತಿಯನ್ನು ಖುಷಿ ಖುಷಿಯಾಗಿ ಅನುಭವಿಸುವ ಭಾವೋತ್ಕಟತೆ ನೋಡುಗರಿಗೆ ತಣ್ಣನೆಯ ಸ್ಪರ್ಶ ನೀಡುತ್ತದೆ. ನಾಯಕಿ ತನ್ನ ನಟನ ಪ್ರತಿಭೆಯನ್ನು ಸಾಬೀತುಗೊಳಿಸಲು ತಾನು ಆಡಿದ ನಾಟಕವನ್ನು ಕಂಡು ಬೆರಗಾದ ನಾಯಕನೊಳಗಿನ ನಿರ್ದೇಶಕ ಆಕೆಗೊಂದು ಅವಕಾಶ ನೀಡಿ ದೊಡ್ಡ ನಟಿಯಾಗಲು ದಾರಿ ಮಾಡಿಕೊಡುತ್ತಾನೆ. ಅದೇ ಮುಂದಕ್ಕೆ ಪ್ರೀತಿಯಾಗಲು ಪ್ರೇರಕವಾಗುತ್ತದೆ. ತನ್ನ ಪ್ರೇಯಸಿಯೊಬ್ಬಳಿದ್ದರೆ ಸಾಕು ಬೇರೆ ಏನು ಬೇಕಾಗಿಲ್ಲ ಎಂಬ ಹಂಬಲ ನಾಯಕನ ಎದೆಯಲ್ಲಿ ಬೇರೂರಿ ಕಲ್ಪನಾ ಲಹರಿಗೆ ಜಾರಿ ತನ್ನಷ್ಟಕ್ಕೆ ತಾನೆ ಕನಸು ಕಾಣುತ್ತಾ ತನ್ನೊಳಗಿನ ಭಾವನೆಗಳನ್ನು ಹೊರ ಹಾಕಲು 'ರತ್ನನ್ ಪರ್ಪಂಚ'ದ ಮೋರೆ ಹೋಗುತ್ತಾನೆ. ತನಗೆ ಲಭ್ಯವಿರುವ ಸವಲತ್ತುಗಳಲ್ಲಿ ತೃಪ್ತಿಪಡಲು ಬಯಸುವ ನಾಯಕನ ಅಂತರ್ನಾದ 'ರತ್ನನ್ ಪರ್ಪಂಚ' ಹಾಡಿನ ಮೂಲಕ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ತನ್ನ ಪ್ರೀತಿಯ ಚಾಂದಿನಿಯೊಂದಿಗೆ ತಾನು ಕಟ್ಟಿಕೊಳ್ಳಬಯಸುವ ಸರಳ, ಸುಖಿ ಜೀವನದ ಕಲ್ಪನೆ ನಿರರ್ಗಳವಾಗಿ ಹರಿಯುತ್ತಾ ಹೋಗುತ್ತದೆ.

ಮೂಲತಃ ತಾವು ಗೀತ ರಚನಾಕಾರರಾಗಿದ್ದರೂ ಉಪೇಂದ್ರ ಜಿ.ಪಿ. ರಾಜರತ್ನಂರವರ ಗೀತೆಯನ್ನು ತಮ್ಮ ಚಿತ್ರಕ್ಕೆ ಅಳವಡಿಸಿಕೊಳ್ಳುವುದರ ಮೂಲಕ ಸಾಹಿತ್ಯದ ಬಗ್ಗೆ ತಮಗೆ ಇರುವ ಆಸಕ್ತಿ, ಸಾಹಿತಿಗಳ ಮೇಲಿನ ಅಪಾರ ಗೌರವವನ್ನು ಎತ್ತಿ ಹಿಡಿದಿದ್ದಾರೆ. ನಮ್ಮ ಗ್ರಾಮೀಣ ಭಾಷೆಯ ಕನ್ನಡ ಹಾಡುಗಳನ್ನು ಆಸ್ಪಾದಿಸುವುದರಲ್ಲಿನ ಮಜ ಉಪೇಂದ್ರರಿಗೆ ಗೊತ್ತಿದ್ದರಿಂದಲೇ ಈ ರೀತಿಯ ಪ್ರಯತ್ನಗಳು ನಡೆಯುತ್ತದೆ. ರತ್ನನ್ ಪರ್ಪಂಚ ಸಾಹಿತ್ಯದ ಭಾವವನ್ನು ಅರ್ಥ ಮಾಡಿಕೊಂಡು ಸ್ವರ ಸಂಯೋಜನೆ ಮಾಡುವಲ್ಲಿ ಗುರುಕಿರಣ್ ಗೆದ್ದಿದ್ದಾರೆ. ತಮ್ಮ ಸಂಗೀತ ನಿರ್ದೇಶನದ ಮೊಟ್ಟ ಮೊದಲ ಚಿತ್ರ 'ಎ' ನಲ್ಲಿಯೇ ತಮ್ಮೊಳಗಿನ ಸಂಗೀತ ಅಭಿರುಚಿ, ವಿಭಿನ್ನತೆ, ಪ್ರಯೋಗಾತ್ಮಕ ಮನೋಧರ್ಮವನ್ನು ಮೆರೆದಿದ್ದಾರೆ.ಮಧ್ಯ ಮಧ್ಯದಲ್ಲಿ ಸಂಗೀತದ ಜೊತೆ ಜೊತೆಗೆ 'ಚಾಂದಿನಿ.. ಓ ಚಾಂದಿನಿ' ಎಂಬ ಕೋರಸ್ ನೊಂದಿಗೆ ಹಾಡು ಸಂಪೂರ್ಣವಾಗಿ ಸಾಗುವಂತೆಯೂ, ಪ್ರೇಕ್ಷಕ, ಕೇಳುಗರ ಏಕಾಗ್ರತೆಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ತಮ್ಮದೇ ಆದ ವಿನೂತನ ಶೈಲಿಯಲ್ಲಿ ವಿಶೇಷವಾಗಿ ನಿಲ್ಲುತ್ತಾರೆ. ಅದಕ್ಕೆ ಪೂರಕವಾಗಿ ಎಲ್.ಎನ್. ಶಾಸ್ತ್ರಿ ಯವರ ಕಂಠ ಕೈ ಜೋಡಿಸಿದೆ. ಒಬ್ಬ ಕುಡುಕ ಕುಡಿದ ಅಮಲಿನಲ್ಲಿ ತನ್ನೊಳಗಿನ ಪ್ರೇಮೊನ್ಮದವನ್ನು ಹೊರ ಹಾಕುವಲ್ಲಿ ಶಾಸ್ತ್ರಿಯವರು ಗೆದ್ದಿದ್ದಾರೆ. ಕುಡುಕನೊಬ್ಬನ ನಾಲಿಗೆ ತೊದಲುವಿಕೆ, ಬಿಕ್ಕಳಿಕೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಹಾಡಿರುವ ಶಾಸ್ತ್ರಿಯವರು ರತ್ನನ್ ಪರ್ಪಂಚ ಹಾಡಿದ ನಂತರವು ಹಾಡಿನ ನಶೆಯಲ್ಲೇ ಇದ್ದರೇನೊ ಅಲ್ಲವೇ? ಇಂತಹ ಅಜರಾಮರ ಗೀತೆಯನ್ನು ನಮಗಾಗಿ ನೀಡಿದ ರಾಜರತ್ನಂರವರಿಗೆ ಋಣಿಯಾಗಿರೋಣ.

'ರತ್ನನ ದಾಂಪತ್ಯಗೀತ'

ಈ ಭೂಮಿಯ ಮೇಲೆ ತನ್ನಂತೆಯೇ ಮೃಣ್ಮಯರಾದ ಸಣ್ಣ ಜನರ ನಡುವೆ ಬೆರೆತು ಬದುಕಬೇಕು ಎಂಬುವನು ರತ್ನ. ಈ ಬದುಕನ್ನು ಬದುಕುತ್ತಲೇ ಮಣ್ಣಿನಿಂದ ಆದಷ್ಟು ಮೇಲೆದ್ದು, ಸಣ್ಣತನವನ್ನು ಆದಷ್ಟು ಸಣ್ಣ ಮಾಡಿಕೊಂಡು, ನಿನ್ನೆಗಿಂತ ಇಂದು ಇಷ್ಟು ಮೇಲಾಗಿ ಬದುಕಿದರೆ, ಅಷ್ಟರಲ್ಲಿಯೇ ತೃಪ್ತಿ ಪಡುವವನು ರತ್ನ. ಹೀಗೆ, ಬದುಕಿನಲ್ಲಿ ನೆಮ್ಮದಿ ಕಾಣುವುದಕ್ಕೆ, ತೃಪ್ತಿ ಪಡೆಯುವುದಕ್ಕೆ ರತ್ನ ಯಾವ ನಂಬಿಕೆ ಇಟ್ಟುಕೊಂಡು ನಡೆದಿದ್ದಾನೆ ಎಂಬುದು ರತ್ನನ್ ಪರ್ಪಂಚದಲ್ಲಿ ರೂಪುಗೊಂಡಿದೆ.

ಹೇಳಿಕೊಳ್ಳುವುದಕ್ಕೆ ಒಂದು ಊರು. ಹಾಗೆಯೇ ತಲೆಯ ಮೇಲೆ ಒಂದು ಸೂರು. ಸೂರು ತಕ್ಕ ಮಟ್ಟಿಗೆ ವಿಶಾಲವಾಗಿದ್ದರೆ, ಗೋಡೆಗಳಿಲ್ಲದ್ದರೂ, ಸೂರ್ಯನ ಬಿಸಿಲಿನಿಂದಲೂ, ಮಳೆಯ ಹೊಡೆತದಿಂದಲೂ ಪಾರಾಗಿ, ಜೀವವನ್ನು ಬಿಗಿ ಹಿಡಿದಿರಬಹುದು. ಅದರಂತೆಯೇ ಮಲಗುವುದಕ್ಕೆ ಭೂಮಿ ತಾಯಿಯ ಮಂಚ. ಮರದ ಕಬ್ಬಿಣದ ಮಂಚಗಳಾದರೆ ಹಾಸಿಗೆ ಸುಪ್ಪತ್ತಿಗೆಗಳಾದರೆ, ಅವುಗಳನ್ನು ಸಂಪಾದಿಸುವ ಶ್ರಮ, ಅವುಗಳನ್ನು ಕಾಪಾಡುವ ಕಷ್ಟ - ಇದರಿಂದ ನೆಮ್ಮದಿಗೆ ಭಂಗ. ಭೂಮಿ ತಾಯಿಯಾದರೋ, ಎಲ್ಲಿ ಎಂದರೆ ಅಲ್ಲಿ, ಹಗಲೆಲ್ಲ ಬೆವರು ಹರಿಸಿ ದುಡಿದು ಬಂದವನಿಗೆ ಭೂಮಿ ತಾಯಿಯ ಮಂಚ - ಅದೇ ಸ್ವರ್ಗದ ನಂದನ.

ಇದಿಷ್ಟೂ ಮನೆಯ ಮಟ್ಟಿಗಾಯಿತು. ಇನ್ನು ಮನೆಯ ಒಳಗೆ? ಕೈ ಹಿಡಿದವಳು ಪುಟ್ನಂಜಿ ನಗುನಗುತ್ತಾ ಉಪ್ಪು ಗಂಜಿ ಕೊಟ್ಟರೆ, ಪೂರ್ತಿಯಾಯಿತು ರತ್ನನ್ ಪರ್ಪಂಚ! ಗೃಹಿಣಿ ಗೃಹಮುಚ್ಯತೋ! ಗೃಹ ಜೀವನದ ಈ ಸಾಮರಸ್ಯವನ್ನು ರತ್ನ-ನಂಜಿ ಇವರ ಹಾಡುಗಳಲ್ಲಿ ಕಾಣಬಹುದು. ರತ್ನ ಹೇಳುತ್ತಾನೆ - ಅನ್ನ ವಸ್ತ್ರಗಳ ಬಡತನ ಏನೇ ಇದ್ದರೂ ಇರಲಿ ಮನಸಿನ ಬಡತನ ಮಾತ್ರ ಇರಬಾರದು. ಅನ್ಯೋನ್ಯವಾದ ಸಂಸಾರದಲ್ಲಿ ಹೆಣ್ಣು ಮರದಂತೆ ಗಂಡು ಬಳ್ಳಿಯಂತೆ, ಆದರೂ ಹೆಣ್ಣು ತಾನು ಮರದಂತೆ ಮೆರೆಯುವುದಿಲ್ಲ. ಅದರಿಂದಲೇ ಗಂಡಿಗೆ ಆ ಹೆಣ್ಣಿನ ಬಗ್ಗೆ ಅಷ್ಟು ಅಭಿಮಾನ! ಮನೆಗಾಗಿ ದುಡಿಯುವ ಜೀವ ಇವನು, ಮನೆಯನ್ನು ನಡೆಸುವ ಜೀವ ಅವಳು. ಇದರಲ್ಲಿ ದೊಡ್ಡದು ಯಾವುದು? ಚಿಕ್ಕದು ಯಾವುದು? ಈಶ್ವರೇಚ್ಚೆಯಂತೆ ಸುಖವಾಗಿ, ತೃಪ್ತಿಯಿಂದ ಬದುಕಿದರೆ - ಅದು ಬದುಕು! ಎಷ್ಟೇ ಸರಸದ ಸಂಸಾರವಾದರೂ, ಮನುಷ್ಯ ಮಾತ್ರರಾದ್ದರಿಂದ ವಿರಸದ ಕ್ಷಣಗಳು ಇಲ್ಲದೇ ಇಲ್ಲ. ಆದರೆ ಅದು ಕ್ಷಣ ಮಾತ್ರ. ದಾಂಪತ್ಯದ ದಾರಿಯನ್ನು ತಿಳಿದವನು, ತನ್ನಾಕೆಯಿಂದ ತಾನು, ತನ್ನ ಮನೆಯಾಕೆಯಿಂದ ಎಂಬುವುದನ್ನು ಒಪ್ಪುತ್ತಾನೆ. ಯಾವ ಗಂಡನ್ನೇ ಆಗಲಿ, ಹಾಲಿನಲ್ಲಿ ಅದ್ದುವವಳು ಅದೇ ಹೆಣ್ಣು, ನೀರಿನಲ್ಲಿ ಅದೇ ನಾರಿ!

ಮೈಮುರಿದು ಬೆವರು ಹರಿಸಿ ದುಡಿಯುವುದರಲ್ಲಿ ರತ್ನನಿಗೆ ವಿಶ್ವಾಸ. ಇನ್ನು, ತಂದದ್ರಲ್ ಒಸಿ ಮುರ್ಸಿ. ದುಡಿದು ತಂದದ್ದರಲ್ಲಿ ಎಲ್ಲವನ್ನು ತನಗಾಗಿ ಮುಗಿಸಿಕೊಳ್ಳುವುದು ಒಂದು ರೀತಿ ಅತಿ. ಸಾಲ ಮಾಡಿ ಬದುಕು ಕೆಡಿಸಿಕೊಳ್ಳುವುದು ಅದೊಂದು ರೀತಿ ಅತಿ! ಅತಿಗಳನ್ನು ಒತ್ತರಿಸಿ, ಮಿತಿಯನ್ನು ಹಿಡಿದರೆ ಮಾತ್ರ ನೆಮ್ಮದಿ ಎಂಬುದು ಬುದ್ಧನ ಮಧ್ಯಮ ಮಾರ್ಗ! ಅಶೋಕನು ತನ್ನ ಶಾಸನದಲ್ಲಿ ಹೇಳಿದ ಅಲ್ಪವ್ಯಯುತಾ, ಅಲ್ಪಭಾಂಡತಾ - ಸ್ವಲ್ಪವಾಗಿ ಈ ಗೀತೆಯಲ್ಲಿ ಉಂಟು.

ಹಾಗೆಯೇ, ಹೊಟ್ಟೆ ಬಟ್ಟೆಗಳಿಗೆ ಬಡತನವಿದ್ದರೂ ತೊಂದರೆಯಿಲ್ಲ. ಆದರೆ ಮನಸಿನ ಬಡತನ ಮಾತ್ರ ದೊಡ್ಡ ಮಾರಿಯೆಂದು ರತ್ನ ಹೇಳುತ್ತಾನೆ. ಮನಸಿನ ಬಡತನಕ್ಕೆ ಅಂಟಿಕೊಂಡದ್ದು ನಡತೆಯ ಬಡತನ. ಒಂದು ಕೈಯಿಂದ ಇನ್ನೊಂದು ಕೈಯಿನ ಕೊಳೆ ಕಳೆದು ಹೋಗುವಂತೆ ಮನಸಿನ ಬಡತನ ಕಳೆದಷ್ಟು ನಡತೆಯ ಬಡತನ ಕಳೆಯುತ್ತದೆ. ನಡತೆಯನ್ನು ಕುರಿತ ಈ ನಂಬಿಕೆ, ರತ್ನ ಕಾಲೂರಿ ಸ್ಥಿರವಾಗಿ ನಿಂತು ಹೆಜ್ಜೆಯೆತ್ತಿ ಇಡುವುದಕ್ಕೆ ಸಹಕಾರಿಯಾಗಿರುವಂತೆಯೇ ಕಷ್ಟಕ್ಕೆ ನಗುಮುಖವಾಗಿ ನೆಗೆಯುವ ಪ್ರಕೃತಿಯ ಪರಿಪಾಲನೆ ಉಸಿರಿನ ಸ್ವಾಸ್ಥವನ್ನು ರತ್ನನಿಗೆ ಕಾಪಾಡಿಕೊಟ್ಟಿದೆ.

ಹೀಗೆ ಏನೇ ಪ್ರಯತ್ನ ನಡೆಸಿ, ತನ್ನ ಶುದ್ಧಿಯನ್ನು ತಾನು ಸಾಧಿಸಿಕೊಂಡರು, ದೈವದ ಕರಾವಂಬನವಿಲ್ಲದೆ ಇದೆಲ್ಲ ಆಗುತ್ತಿರಲಿಲ್ಲವೆಂದು ರತ್ನನ ಕಟ್ಟಕಡೆಯ ನಂಬಿಕೆ. ಮತ್ತೇ ಅದೇ ಮಧ್ಯಮ ವರ್ಗ. ದೇವರೆಂಬುದು ರತ್ನ ಕಾಣದ ತತ್ವ ಆದರೂ ರತ್ನನಿಗೆ ಅದರಲ್ಲಿ ಅಪಾರವಾದ ನಂಬಿಕೆ. ಅದು ಇಲ್ಲ ಎಂದವರೊಡನೆ ರತ್ನನಿಗೆ ಚರ್ಚೆ ಬೇಡ. ರತ್ನ ಹೇಳುತ್ತಾನೆ -

ದೇವ್ರ್ ಏನ್ರ ಕೊಡಲಣ್ಣ

ಕೊಡದಿದ್ರೆ ಬುಡಲಣ್ಣ

ನಾವೆಲ್ಲ ಔನೀಗಿ ಬಚ್ಛ!

ಔನ್ ಆಕಿದ್ ತಾಳ್ದಂಗೆ

ಕಣ್ ಮುಚ್ಕೊಂಡ್ ಯೋಳ್ದಂಗೆ

ಕುಣಿಯಾದೆ ರತ್ನನ್ ಪರ್ಪಂಚ!

ಹೀಗೆ ಕವಿ ತನ್ನೊಳಗಿನ ಭಾವನೆಗಳನ್ನು ಬಿಚ್ಚಿಟ್ಟಿರುವುದರ ಕುರಿತು ವಿಮರ್ಶಕರು ಹೇಳಿರುತ್ತಾರೆ. ಚಿತ್ರದ ಕಥಾನಾಯಕನ ಭಾವನೆಗಳಿಗೆ ಸ್ಪಂದಿಸುವ ಈ ಹಾಡು ಜನರನ್ನು ಕಾಡಿದೆ, ಕಾಡುತ್ತಲೆ ಇದೆ.

'ರತ್ನನ್ ಪರ್ಪಂಚ' :


ಯೇಳ್ಕೊಳ್ಳಾಕ್ ಒಂದ್ ಊರು

ತಲೇಮೇಗ್ ಒಂದ್ ಸೂರು

ಮಲಗಾಕೆ ಬೂಮ್ತಾಯಿ ಮಂಚ ;

ಕೈ ಯಿಡದೋಳ್ ಪುಟ್ನಂಜಿ

ನೆಗನೆಗತ ಉಪ್ಗಂಜಿ

ಕೊಟ್ರಾಯ್ತು ರತ್ನನ್ ಪರ್ಪಂಚ!

ಅಗಲೆಲ್ಲ ಬೆವರ್ ಅರ್ಸಿ

ತಂದದ್ರಲ್ಲ್ ಒಸಿ ಮುರ್ಸಿ

ಸಂಜೇಲಿ ವುಳಿ ಯೆಂಡ ಕೊಂಚ ;

ಯೀರ‍್ತ ಮೈ ಝುಂ ಅಂದ್ರೆ

ವಾಸ್ನೆ ಘಂ ಘಂ ಅಂದ್ರೆ

ತುಂಭೋಯ್ತು ರತ್ನನ್ ಪರ್ಪಂಚ !

ಏನೋ ಕುಸಿಯಾದಾಗ

ಮತ್ತ್ ಎಚ್ಚಿ ಓದಾಗ

ಅಂಗೇನೆ ಪರಪಂಚದ್ ಅಂಚ ;

ದಾಟ್ಕಂಡಿ ಆರಾಡ್ತ

ಕನ್ನಡದಲ್ ಪದವಾಡ್ತ

ಇಗ್ಗೋದು ರತ್ನನ್ ಪರ್ಪಂಚ !

ದುಕ್ಕಿಲ್ಲ ದಾಲಿಲ್ಲ

ನಮಗ್ ಅದರಾಗ್ ಪಾಲಿಲ್ಲ

ನಾವ್ ಕಂಡಿಲ್ಲ್ ಆ ತಂಚ ವಂಚ ;

ನಮ್ಮಸ್ಟಕ್ ನಾವಾಗಿ

ಇದ್ದಿದ್ರಲ್ಲ್ ನಾವಾಗಿ

ಬಾಳೋದು ರತ್ನನ್ ಪರ್ಪಂಚ !

ಬಡತನ ಗಿಡತನ

ಏನಿದ್ರೇನ್ ? ನಡತೇನ

ಚೆಂದಾಗ್ ಇಟ್ಕೊಳ್ಳಾದೆ ಅಚ್ಛ !

ಅಂದ್ಕೊಂಡಿ ಸುಕವಾಗಿ

ಕಸ್ಟಕ್ ನೆಗಮೊಕವಾಗಿ

ನೆಗೆಯೋದೆ ರತ್ನನ್ ಪರ್ಪಂಚ !

ದೇವ್ರ್ ಏನ್ರ ಕೊಡಲಣ್ಣ

ಕೊಡದಿದ್ರೆ ಬುಡಲಣ್ಣ

ನಾವೆಲ್ಲ ಔನೀಗೆ ಬಚ್ಛ !

ಔನ್ ಆಕಿದ್ ತಾಳ್ದಂಗೆ

ಕಣ್ ಮುಚ್ಕೊಂಡ್ ಯೇಳ್ದಂಗೆ

ಸೋಮವಾರ, ಮಾರ್ಚ್ 19, 2012

"ಬೆಟ್ಟದ ಮೇಲೊಂದು ಮಧುಚಂದ್ರ"

'ದಲಿತ ಕವಿಯ ಹರಿತ ಲೇಖನಿ!'

ಇಕ್ರಲಾ ವದೀರ‍್ಲಾ ಈ ಸೂಳೇ ಮಕ್ಳ ಮೂಳೇ ಮುರೀರ‍್ಲಾ ಎಂದು ಎಪ್ಪತ್ತರ ದಶಕದಲ್ಲಿ ಆರ್ಭಟಿಸಲು ಶುರುವಿಕ್ಕಿಕೊಂಡ ಡಾ|| ಸಿದ್ಧಲಿಂಗಯ್ಯನವರು ಕರ್ನಾಟಕದ ದಲಿತರ ಪಾಲಿಗೆ ಅಭಿನವ ಅಂಬೇಡ್ಕರ್ ಆದಂಥವರು. ತಮ್ಮ ಹರಿತವಾದ ಲೇಖನಿಯಿಂದ ಸರ್ವನೀಯರ ಸೊಕ್ಕು ಮುರಿಯಲು ನಿರಂತರವಾಗಿ ಹೋರಾಡಿದಂತವರು. ರಾಜ್ಯಾದ್ಯಂತ ಎಲ್ಲಿಯೇ ದಲಿತಪರ ಹೋರಾಟ, ಚಳುವಳಿ, ಮೆರವಣಿಗೆಗಳು ನಡೆದರೂ ಅಲ್ಲಿ ಸಿದ್ಧಲಿಂಗಯ್ಯನವರ ಕ್ರಾಂತಿ ಗೀತೆಗಳು ಮುಗಿಲು ಮುಟ್ಟುತ್ತಿದ್ದವು, ಇಂದಿಗೂ ಮುಟ್ಟುತ್ತಿವೆ.

ಹಿಂದೂ ಸಮಾಜದಲ್ಲಿನ ಹುಳುಕುಗಳನ್ನು ಎತ್ತಿ ಹಿಡಿದು ದಲಿತರ ಮೇಲೆ ಆಗುತ್ತಿದ್ದ ದೌರ್ಜನ್ಯವನ್ನು ಧಿಕ್ಕರಿಸಿ ನಿಂತ ಎದಗಾರಿಕೆ ಇವರ ಕೃತಿಗಳಿಗಿದೆ. ನಮ್ಮ ಪರಂಪರೆ, ಜಾತೀಯತೆ, ಮೇಲು ಕೀಳಿನ ತಾರತಮ್ಯ, ಮೇಲ್ವರ್ಗದವರ ದರ್ಪ, ಆತ್ಮಾನುಕಂಪ ಮತ್ತು ಅಕ್ರೋಶಗಳ ಎರಡು ಅತಿಗಳಲ್ಲಿ ತುಯ್ಯಲಾಡುತ್ತಿದ್ದ ಮನೋ ರಾಜಕೀಯ ಸ್ಥಿತಿ, ಚರಿತ್ರೆಯ ವಿಕಾಸ ಪಥದಲ್ಲಿ ಆಧುನೀಕರಣ ತಮ್ಮ ಬಿಡುಗಡೆಯ ಏಕಮಾತ್ರ ದಾರಿಯೆಂಬ ಆಶಾವಾದ. ಆದ್ದರಿಂದ ಆಧುನೀಕರಣಕ್ಕಿಂತ ಹೆಚ್ಚಾಗಿ ಹಿಂದಿನವರ ದಬ್ಬಾಳಿಕೆಯ ಮೇಲಿನ ಬಗ್ಗೆ ಧಗಧಗಿಸುವ ಸಿಟ್ಟು - ಈ ಬಗೆಯ ವೈಚಾರಿಕ ಆಕೃತಿಗಳು ಕೇವಲ ಕಾರ್ಯಕ್ಕೆ ಸೀಮಿತವಾಗಿರಲಿಲ್ಲ. ಬದಲಿಗೆ, ೭೦-೮೦ ರ ದಶಕಗಳಲ್ಲಿ ದಲಿತ ಚಳುವಳಿಗಳು ಗಟ್ಟಿಗೊಳ್ಳಲು ಕಾರಣೀಭೂತವಾಗಿದ್ದವು. ಅಂಬೇಡ್ಕರ್ ರವರ ವಿಚಾರ, ಚಿಂತನೆಗಳು, ಸಿದ್ಧಲಿಂಗಯ್ಯನವರ ಮೇಲೆ ಎಷ್ಟು ಪ್ರಭಾವ ಬೀರಿದ್ದವು ಎನ್ನುವ ಪ್ರಶ್ನೆಗೆ ಅವರ ಕೃತಿಗಳೇ ಉತ್ತರ ನೀಡುತ್ತವೆ.

ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಕುಸುಮ ಬಾಲೆ, ಅವತಾರಗಳು, ಹೊಸ ಕವಿತೆಗಳು - ಇವು ಕವಿ ಸಿದ್ಧಲಿಂಗಯ್ಯನವರ ಸಾಮರ್ಥ್ಯವನ್ನು ಸಾರುವಂತಹ ಕೃತಿಗಳು. ಸಾಹಿತ್ಯ ಕೃಷಿಯ ಜೊತೆ ಜೊತೆಗೆ ರಾಜಕೀಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡ ಕವಿ ದೀನರ ದನಿಯಾಗಲು ಶತಾಯ ಗತಾಯ ಪ್ರಯತ್ನಿಸಿದರು. ಅವರು ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹವು ಪುಸ್ತಕ ರೂಪದಲ್ಲಿ ಲಭ್ಯವಿದ್ದು, ಜನಪ್ರಿಯತೆ ಗಳಿಸಿದೆ. ಇಂತಹ ಅಪರೂಪದ ಕವಿಯು ೧೯೮೩ ರಲ್ಲಿ ಪ್ರಕಟಿಸಿದ ಕಪ್ಪು ಕಾಡಿನ ಹಾಡು ಕವನ ಸಂಕಲನದಲ್ಲಿನ ಸುಟ್ಟಾವು ಬೆಳ್ಳಿಕಿರಣ ಗೀತೆಯು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿ, ಶಿವರಾಮ ನಟಿಸಿದ ಬಾನಲ್ಲೆ ಮಧುಚಂದ್ರಕೆ ಚಿತ್ರದಲ್ಲಿ ಚಿತ್ರಗೀತೆಯಾಗಿ ಬಳಕೆಯಾಗಿ ಜನಮಾನಸದಲ್ಲಿ ನೆಲೆನಿಂತ ವಿಚಾರ ಖುಷಿ ತರುತ್ತದೆ. ಹಂಸಲೇಖ ಸಂಗೀತ ಸಂಯೋಜನೆಯಲ್ಲಿ ಡಾ|| ಎಸ್. ಪಿ. ಬಾಲಸುಬ್ರಮಣ್ಯಂ ಹಾಡಿರುವ ಈ ಗೀತೆ ಇಂದಿಗೂ ಕೇಳುಗರ ಮನಸಿನಲ್ಲಿ ತಣ್ಣನೆಯ ಆಹ್ಲಾದವನ್ನು ತರುವಂತಹ ಗುಣ ಹೊಂದಿದೆ.

'ನಾಗತಿಹಳ್ಳಿಯ ಸಾಹಿತ್ಯ ಪ್ರೇಮ'


ಮೂಲತಃ ಸಾಹಿತಿಯಾಗಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರವರು ತಮ್ಮ ಚಿತ್ರಗಳಲ್ಲಿಯೂ ಸಾಹಿತ್ಯದ ಸಾರವನ್ನು ಧಾರಾಳವಾಗಿ ಹರಿಸುತ್ತಿರುವ ಕ್ರಿಯಾಶೀಲ ವ್ಯಕ್ತಿ. ಲೇಖಕ, ಅಂಕಣಕಾರ, ಅಧ್ಯಾಪಕ - ಹೀಗೆ ನಾನಾ ಅಪತಾರಗಳನ್ನು ಎತ್ತಿ ತಮ್ಮ ಛಾಪನ್ನು ಮೂಡಿಸಿದಂತಹ ನಾಗತಿಹಳ್ಳಿ ಚಿತ್ರ ನಿರ್ದೇಶಕರಾಗಿಯೂ ತಮ್ಮದೇ ವಿಶಿಷ್ಟವಾದ ಸ್ಥಾನವನ್ನು ಅಲಂಕರಿಸಿದಂತಹ ಸೃಜನಶೀಲ ನಿರ್ದೇಶಕ. ತಮ್ಮ ಚಿತ್ರದ ಕತೆಯಾಗಿರಬಹುದು, ಸಾರಾಗವಾಗಿ ಬಿಚ್ಚಿಕೊಳ್ಳುವ ಚಿತ್ರಕತೆಯಾಗಿರಬಹುದು, ಸಹಜವಾದ ಸಂಭಾಷಣೆ ಇರಬಹುದು, ನಮ್ಮ ಮಣ್ಣಿನ ಸೊಗಡುಳ್ಳ ಗೀತ ಸಾಹಿತ್ಯವಿರಬಹುದು, ಪಾತ್ರಗಳ ಸೃಷ್ಟಿ, ಅವುಗಳ ಅಭಿವ್ಯಕ್ತಿ - ಎಲ್ಲದರಲ್ಲೂ ನಾಗತಿಹಳ್ಳಿ ತಮ್ಮತನವನ್ನು ತೋರಿಸಬಲ್ಲರು. ಪೂರ್ವಭಾವಿಯಾಗಿ ಯಾವುದೇ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡದೆ ನಂತರ ನೇರವಾಗಿ ಚಿತ್ರ ನಿರ್ದೇಶನಕ್ಕೆ ಇಳಿದ ಇವರಿಗೆ ಸಾಥ್ ನೀಡಿದ್ದು ಅವರ ಓದು ಮತ್ತು ಜೀವನಾನುಭವ. ಉಂಡು ಹೋದ ಕೊಂಡು ಹೋದ ಚಿತ್ರದಿಂದ ಹಿಡಿದು ಇತ್ತೀಚಿನ ಒಲವೇ ಜೀವನ ಲೆಕ್ಕಾಚಾರದ ತನಕ ನಾಗತಿಹಳ್ಳಿ ನಾಗತಿಹಳ್ಳಿಯಾಗಿಯೇ ಕಾಣುತ್ತಾರೆ. ಯಾರ ಪ್ರಭಾವಕ್ಕೂ ಒಳಗಾಗದೆ ತಮ್ಮ ನಿರ್ದಿಷ್ಟ ಜಾಡಿನಲ್ಲಿಯೇ ಸಾಗುತ್ತಿದ್ದಾರೆ. ಗಂಭೀರವಾದ ಕಥಾವಸ್ತುವನ್ನು ಚಿತ್ರಕತೆಯಾಗಿಸುವ ಸಂದರ್ಭದಲ್ಲಿ ಲಘು ಹಾಸ್ಯ ಬೆರೆಸಿ ಪ್ರೆಸಂಟ್ ಮಾಡುವ ಶೈಲಿ ನಿಜಕ್ಕೂ ಶಾಘ್ಲನೀಯ. ಆಗಾಧ ಗುಣಮಟ್ಟ ಇರುವ ಕನ್ನಡ ಸಾಹಿತ್ಯವನ್ನು ಅವರು ಗೌರವಿಸುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅವರು ರಚಿಸಿದ ಗೀತೆಗಳೇ ಅದಕ್ಕೆ ನಿದರ್ಶನ. ಇಂತಹ ಉತ್ತಮ ಹಿನ್ನೆಲೆ ಇರುವ ನಾಗತಿಹಳ್ಳಿ ಚಂದ್ರಶೇಖರ್‌ರವರು ತಮ್ಮ ನಿರ್ದೇಶನದ ಬಾನಲ್ಲೆ ಮಧುಚಂದ್ರಕೆ ಚಿತ್ರದಲ್ಲಿ ಡಾ|| ಸಿದ್ಧಲಿಂಗಯ್ಯ ರಚಿಸಿದ ಸುಟ್ಟಾವು ಬೆಳ್ಳಿಕಿರಣ ಗೀತೆಯನ್ನು ಅಳವಡಿಸಿಕೊಂಡಿರುವ ಅಂಶ ಅವರಿಗೆ ಇರುವ ಸಾಹಿತ್ಯ ಪ್ರೇಮ ಹಾಗೂ ಕವಿಗಳ ಮೇಲಿನ ಗೌರವವನ್ನು ತೋರಿಸುತ್ತದೆ. ಸ್ವತಹ ತಾವು ಪ್ರತಿಭಾವಂತ ಸಾಹಿತಿ ಆಗಿದ್ದರೂ ಕೂಡಾ ಹಂಸಲೇಖರವರು ಆ ಗೀತೆಗೆ ಸಂಗೀತ ಸಂಯೋಜನೆ ಮಾಡಿರುವುದು ನಿಜಕ್ಕೂ ಆರೋಗ್ಯಕರ ಸಂಗಂತಿ.

'ಸಿದ್ಧಲಿಂಗಯ್ಯನವರ ಗೆಳತಿ'


ದಲಿತ ಕವಿ ಎಂದೇ ಖ್ಯಾತರಾಗಿರುವ ಸಿದ್ಧಲಿಂಗಯ್ಯನವರು ಪ್ರೇಮ ಗೀತೆಗಳನ್ನು ಬರೆದಿದ್ದಾರೆ ಎಂದರೆ ನಿಮಗೆ ಅಚ್ಚರಿಯಾಗದಿರದು. ಹೌದು, ಸಿದ್ಧಲಿಂಗಯ್ಯನವರು ಕೇವಲ ಕ್ರಾಂತಿ ಕವಿ ಅಲ್ಲ. ಅವರೊಳಗೊಬ್ಬ ಶಾಂತಿ ಪ್ರಿಯ, ಸೂಕ್ಷ್ಮ ಮನಸ್ವಿ ಖಂಡಿತ ಇದ್ದಾನೆ. ತಾವು ರಚನೆಗೆ ತೊಡಗಿದಾಗ ತನ್ನ ಸುತ್ತಮುತ್ತಲಿನ ಸಮಾಜದ ಹುಳುಕುಗಳು, ಮೇಲ್ವರ್ಗದಿಂದ ಕೆಳವರ್ಗದವರಿಗೆ ಆಗುವ ದೌರ್ಜನ್ಯಗಳು, ಜಾತೀಯತೆ - ಹೀಗೆ ತಮ್ಮನ್ನು ನಿತ್ಯವೂ ಕಾಡುತ್ತಿದ್ದ ಜಿಜ್ಞಾಸೆಗಳಿಗೆ ಅಕ್ಷರ ರೂಪ ಕೊಡಲು ಮುಂದಾದಾಗ ಕ್ರಾಂತಿ ಗೀತೆಗಳು ಸಹಜವಾಗಿ ಹುಟ್ಟಿಕೊಂಡವು. ಕವಿಯ ಮನಸಿನಲ್ಲಿ ಮೌನವಾಗಿ ಅಡಗಿದ್ದ ಪ್ರತಿಭಟನೆಯ ಕಿಡಿಗಳು ಹಾಡುಗಳಾಗಿ ಹೊರಬಂದವು. ವಿಚಾರ ಕ್ರಾಂತಿಗೆ, ಬಂಡಾಯ ಸಾಹಿತ್ಯಕ್ಕೆ ಹೊಸ ಆಯಾಮ ಒದಗಿಸಿ ಕೊಟ್ಟರು. ಆದರೆ ಸಿದ್ಧಲಿಂಗಯ್ಯನವರೊಳಗೆ ಒಬ್ಬ ಮೃದುವಾದ ಕವಿ ಇದ್ದಾನೆ. ಸೂಕ್ಷ್ಮ ಸಂವೇದನೆ, ಆರ್ಧ್ರತೆ, ಮಾನವೀಯತೆ, ಸವಿ ಸ್ಪಂದನೆ - ಹೀಗೆ ಒಬ್ಬ ಕವಿಗಿರಬೇಕಾದ ಎಲ್ಲಾ ಗುಣಗಳು ಇರುವುದರಿಂದಲೇ ಸುಟ್ಟಾವು ಬೆಳ್ಳಿಕಿರಣ ಎಂಬ ಅದ್ಭುತ, ಅನುಪಮ ಗೀತೆ ಹುಟ್ಟಿ ಬರಲು ಸಾಧ್ಯವಾಯಿತು. ಕವಿ ತನ್ನ ಗೆಳತಿಯ ಮೇಲೆ ಎಷ್ಟು ಪ್ರೀತಿಯನ್ನು ಇಟ್ಟಿರುತ್ತಾನೆ ಎಂಬ ನಿಗೂಢವಾದ ಸತ್ಯ ಈ ಕವಿತೆಯ ಸಾಲುಗಳಲ್ಲಿ ಹಂತ ಹಂತವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ ಎಂದು ಮೊದಲಾಗುವ ಈ ಗೀತೆಯ ಸಾಲಿನಲ್ಲಿ ಕವಿ ತನ್ನ ಪ್ರೀತಿಯ ತೀವ್ರತೆಯನ್ನು ಹೇಳ ಹೊರಟಿದ್ದಾನೆ. ಚೆಲುವಾದ ನಿನ್ನ ಮಲ್ಲಿಗೆಯ ಮೈಯ ಸುಟ್ಟಾವು ಬೆಳ್ಳಿಕಿರಣ ಎಂದು ಮುಂದುವರೆಸುತ್ತಾ ತನ್ನ ಗೆಳತಿಯ ಕೋಮಲವಾದ ಮೈಯನ್ನು ಬೆಳ್ಳಿಕಿರಣವು ಕೂಡ ಸುಡಬಹುದು ಎನ್ನುವ ಆತಂಕ ಕವಿಯನ್ನು ಕಾಡುತ್ತಿದೆ. ಹಾಗೆ ಮುಂದುವರೆದರೆ ಇಳಿಜಾರಿನಲ್ಲಿ ಇಳಿಯಬೇಡ, ಅಲ್ಲಿ ಮೊಲದ ಹಿಂಡುಗಳು ನಿನ್ನ ಪಾದವನ್ನು ಮುತ್ತಿಕೊಳ್ಳುತ್ತವೆ. ಹಾಗೆ ಮುತ್ತಿಕೊಂಡರೆ ತನ್ನಿಂದ ಸಹಿಸಿಕೊಳ್ಳಲಾಗದು ಎಂದು ಸಹ ವಿನಂತಿಸಿಕೊಳ್ಳುತ್ತಾನೆ.

ಆ ಊರ ಬನದಲ್ಲಿ ನೀನು ಒಂಟಿ ಹೂವಾಗಿ ಅರಳಬೇಡ, ಹಾಗೊಂದು ಅರಳಿದರೆ ಅಲ್ಲಿರುವ ದುಂಬಿಗಳ ಧಾಳಿಗೆ ನೀನು ಸಿಲುಕಬೇಕಾಗುತ್ತದೆ ಎಂದು ಹೇಳುತ್ತಾನೆ. ಒಂಟಿ ಹೂವಾಗಿ ಎಂಬ ಮಾತಿನಲ್ಲಿ ಕವಿಯು ತನ್ನವಳು ಮಾತ್ರ ರೂಪಸಿ, ತನ್ನ ರೂಪವತಿಯ ಎದುರು ಇತರ ಹುಡುಗಿಯರೆಲ್ಲರು ಸುಂದರಿಯರಲ್ಲ ಎಂಬ ಉದ್ದೇಶವನ್ನು ವ್ಯಕ್ತಪಡಿಸಿರಬಹುದೇ ನಾವೇ ಊಹಿಸಿಕೊಳ್ಳೋಣ. ಅಂದು ನೀನು ನನ್ನೆದೆಯ ತೋಟದಲ್ಲಿ ನೆಟ್ಟ ಒಲವಿನ ಬಳ್ಳಿ ಹೂ ಬಿಟ್ಟಿರುವುದೆ? ಫಲ ಕೊಟ್ಟಿರುವುದೆ? ಎಂದು ಪ್ರಶ್ನಿಸುವ ಮುಖಾಂತರ ನಾನು ಪ್ರೀತಿಸುವಷ್ಟೇ ಪ್ರಮಾಣದಲ್ಲಿ ನೀನು ನನ್ನನ್ನು ಪ್ರೀತಿಸುತ್ತಿರುವೆಯಾ ಎಂದು ಪ್ರಶ್ನೆ ಮಾಡುತ್ತಾನೆ. ಇದರ ಒಳಾರ್ಥ ಪ್ರೇಮಿಯೊಬ್ಬ ತನ್ನ ಸಂಗಾತಿಯಿಂದ ನಿರೀಕ್ಷಿಸುವ ಪ್ರೀತಿಯ ಪ್ರಮಾಣ ಎಷ್ಟು ಇರುತ್ತವೆ ಎಂಬ ಅಂಶ ಇಲ್ಲಿ ಇಣುಕುತ್ತದೆ.

ನಿನ್ನಂತರಂಗದಲ್ಲೊಂದು ನೋವು ನಾನಾಗಿ ನಿಂತುಬಿಟ್ಟೆ, ನೀನೊಪ್ಪಿಕೊಂಡ ಚಂದಿರನ ಕಣ್ಣ ಬೆಳಕಾಗಿ ಕೂಡಿಕೊಂಡೆ ಎಂದು ಮುಂದುವರಿಸುತ್ತಾ ಕವಿ ಕೆಲವು ಗೂಢಾರ್ಥಗಳನ್ನು ಹೇಳಬಯಸುತ್ತಾನೆ. ಪ್ರೀತಿ ಎಂಬುದು ಹಿತವಾದ ನೋವು, ಸಿಹಿಯಾದ ಹಿಂಸೆ, ಮುಗಿಯದ ಯಾತನೆ, ತೀರದ ಯಾಚನೆ - ಹೀಗೆ ತಮ್ಮದೇ ರೀತಿಯಲ್ಲಿ ಪ್ರಸ್ತಾಪಿಸಿರಬಹುದೇ ಎಂದು ನಾವು ಕಲ್ಪಿಸಿಕೊಳ್ಳಬಹುದು. ನೀನಿತ್ತ ಒಲವು, ನಾನಿತ್ತ ವಿಷವು ಒಂದಾಗಲಾರವೆಂದು, ನೀ ಕೊಟ್ಟ ಜೀವ ನಾ ಕೊಟ್ಟ ಸಾವು ಸಮಾನಾಗಬಹುದೇ ಗೆಳತಿ ಎಂದು ಕೂಡಾ ಪ್ರಶ್ನಿಸುತ್ತಾನೆ. ತನ್ನವಳು ಕೊಟ್ಟ ಒಲವಿಗೆ ಬದಲಾಗಿ ತಾನು ಕೊಟ್ಟಂತಹ ಉಡುಗೊರೆ ವಿಷ ಎಂಬ ಸತ್ಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾನೆ. ನೀನು ಜೀವ ಕೊಟ್ಟರೆ ನಾನು ಸಾವು ಕೊಟ್ಟೆ ಇವು ಸಮಾನಾಗಬಹುದೆ ಗೆಳತಿ ಎಂದು ಹೇಳುವಾಗ ಕವಿಯ ಭಾವ ತೀವ್ರತೆ ಎಷ್ಟಿತ್ತು ಎಂದು ಯೋಚನೆ ಮಾಡಬೇಕು. ಕಂಡಂಥ ಕನಸು ಫಲಿಸಿತ್ತೆ ಗೆಳತಿ ಕನಸಿತ್ತು ಕಡಲಿನಲ್ಲಿ, ತೆಂಗು ತಾರೆಗಳ ಸಂಗಮವು ಮುಗಿದು ಮನಸಿತ್ತು ಮುಗಿಲಿನಲ್ಲಿ ಎಂದು ಗೀತೆಗೊಂದು ಸಮಾಪ್ತಿ ಹೇಳುತ್ತಾನೆ ಕವಿ. ತಾವು ಕಂಡಂತಹ ಕನಸು ನಿಜವಾಗಿಯೂ ನನಸಾಯಿತೇ? ಅಥವಾ ಇಲ್ಲವೇ? ಎಂದು ಪ್ರಶ್ನೆ ಮಾಡುವುದರ ಮೂಲಕ ತನ್ನೊಳಗಿನ ಗೊಂದಲವನ್ನು ಸಾಬೀತುಪಡಿಸುತ್ತಾನೆ. ಅಥವಾ ಕನಸಿತ್ತು ಕಡಲಿನಲ್ಲಿ ಎನ್ನುವ ಮೂಲಕ ಕವಿಯ ಪರೋಕ್ಷ ಉತ್ತರ ಬೇರೆಯದೆ ಆಗಿರುವುದನ್ನು ಕೂಡಾ ಇಲ್ಲಿ ಗಮನಿಸಬಹುದು.

ತೆಂಗು ತಾರೆಗಳ ಸಂಗಮವು ಮುಗಿದು ಮನಸಿತ್ತು ಮುಗಿಲಿನಲಿ - ಎಂಬ ಸಾಲಿನಲ್ಲಿ ತಮ್ಮೊಳಗಿನ ಕಾವ್ಯದ ವಿನೂತನ ಶೈಲಿಯನ್ನು ದಾಖಲಿಸುತ್ತಾರೆ ಸಿದ್ಧಲಿಂಗಯ್ಯನವರು. ಆಕಾಶದೆತ್ತರಕ್ಕೆ ಬೆಳೆದು ನಿಂತ ತೆಂಗಿನಮರ ತಾರೆಗಳೊಂದಿಗೆ ಮಾತನಾಡುತ್ತಿದೆ, ಭಾವನೆಗಳನ್ನು ಅಂಚಿಕೊಳ್ಳುತ್ತದೆ. ಒಟ್ಟಾರೆಯಾಗಿ ತೆಂಗು ತಾರೆಗಳು ಆತ್ಮೀಯವಾಗಿ ಸಂಗಮಿಸುತ್ತವೆ ಎಂಬ ಕವಿಯ ಆಶಯ ಅವರೊಳಗಿನ ಸೃಜನ ಶೀಲತೆಗೆ ಹಿಡಿದ ಕನ್ನಡಿ. ಮನಸಿತ್ತು ಮುಗಿಲಿನಲ್ಲಿ ಎನ್ನುವಾಗ ಅವರ ಕಾವ್ಯದ ಧೀಶಕ್ತಿ ಎಂತಹುದು ಎಂದು ಅರಿತುಕೊಳ್ಳಬಹುದು.ಹೀಗೆ, ಕವಿ ಸಿದ್ಧಲಿಂಗಯ್ಯನವರ ಗೀತೆಗೂ, ಬಾನಲ್ಲೆ ಮಧುಚಂದ್ರಕೆ ಚಿತ್ರದ ಸನ್ನಿವೇಶಕ್ಕೆ ಹೊಂದಾಣಿಕೆಯಾಗಿದ್ದು ಹಾಡು ಉತ್ತಮವಾಗಿ ಹೊಂದುತ್ತವೆ. ಈ ಗೀತೆಯನ್ನು ನೀಡಿದ ಸಿದ್ಧಲಿಂಗಯ್ಯನವರಿಗೆ ಧನ್ಯವಾದ.

'ಸುಟ್ಟಾವು ಬೆಳ್ಳಿಕಿರಣ'

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ

ಸುಳಿದಾಡಬೇಡ ಗೆಳತಿ

ಚೆಲುವಾದ ನಿನ್ನ ಮಲ್ಲಿಗೆಯ ಮಯ್ಯ

ಸುಟ್ಟಾವು ಬೆಳ್ಳಿ ಕಿರಣ

ಇಳಿಜಾರಿನಲ್ಲಿ ಆ ಕಣಿವೆಯಲ್ಲಿ

ನೀ ಇಳಿಯ ಬೇಡ ಗೆಳತಿ

ತತ್ತರಿಸುವಂತೆ ಕಾಲಲ್ಲಿ ಕಮಲ

ಮುತ್ತುವವು ಮೊಲದ ಹಿಂಡು

ಈ ಊರ ಬನಕೊಬ್ಬಳೇ ಒಂಟಿ

ಹೂವಾಗಿ ಅರಳಿ ನೀನು

ಮರೆಯಾಗಬೇಡ ಮಕರಂದವೆಂದ

ದುಂಬಿಗಳ ದಾಳಿಯಲ್ಲಿ

ನನ್ನೆದೆಯ ತೋಟದಲ್ಲಂದು ನೀನು

ನೆಟ್ಟಂತ ಪ್ರೀತಿ ಬಳ್ಳಿ

ಫಲ ಕೊಟ್ಟಿತೇನೆ ಹೂ ಬಿಟ್ಟಿತೇನೆ

ಉಲ್ಲಾಸವನ್ನು ಚೆಲ್ಲಿ

ನಿನ್ನಂತರಂಗದಲ್ಲೊಂದು ನೋವು

ನಾನಾಗಿ ನಿಂತು ಬಿಟ್ಟೆ

ನೀನೊಪ್ಪಿಕೊಂಡ ಚಂದಿರನ ಕಣ್ಣ

ಬೆಳಕಾಗಿ ಕೂಡಿಕೊಂಡೆ

ನೀನಿತ್ತ ಒಲವು ನಾನಿತ್ತ ವಿಷವು

ಒಂದಾಗಲಾರವೆಂದು

ನೀ ಕೊಟ್ಟ ಜೀವ ನಾ ಕೊಟ್ಟ ಸಾವು

ಸಮನಾಗಬಹುದೆ ಗೆಳತಿ

ಕಂಡಂಥ ಕನಸು ಫಲಿಸಿತ್ತೆ ಗೆಳತಿ

ಕನಸಿತ್ತು ಕಡಲಿನಲ್ಲಿ

ತೆಂಗು ತಾರೆಗಳ ಸಂಗಮವು ಮುಗಿದು

ಮನಸಿತ್ತು ಮುಗಿಲಿನಲ್ಲಿ

ಸೋಮವಾರ, ಮಾರ್ಚ್ 12, 2012

ಗಂಡ ಪೊಲೀಸ್ ಹೆಂಡ್ತಿ ಲಾಯರ್

ಗಂಡ ಪೊಲೀಸ್ ಹೆಂಡ್ತಿ ಲಾಯರ್
ಸಿಕ್ಕಾಪಟ್ಟೆ ಫೈಟು
ಬೀದ್ ಬೀದೀಲಿ ಕಲ್ ತೂರಾಟ
ಮನೇಲ್ ಬೆಲ್ಟು ಸೌಟು

ಖಾಕಿ ಪ್ಯಾಂಟು ಒಗೆಯೋಳಲ್ಲ
ಕೋಣೆ ತುಂಬ ನಾತ
ಕರಿಕೋಟು ಪೇದೆ ಕಣ್ಗೆ
ಭಯಂಕರ ಭೂತ

ನಾಲ್ಗೇಗ್ ನರ್ಕ ತೋರ್ಸೋ ಚಟ್ನಿ
ತೂತೇ ಇಲ್ದ ದೋಸೆ
ವಡವೆ ಸೀರೆ ಅಂಗ್ಡಿಗ್ ರಜಾ
ಮಲ್ಗೆ ಹೂವ ಕನಸೇ

ಒಂದೇ ಬೆಡ್ ರೂಂ ಎರಡೆರಡ್ ಲೋಕ
ಸೆಂಟ್ರಲ್ ಪಾಪಿ ಕೂಸು
ಬಗ್ ನೋಡೋರ್ಗೆ ಕಾಣೋದಲ್ಲಿ
ಇಂಡ್ಯಾ ಪಾಕ್ ಮ್ಯಾಪು

ಕರಿಬಸವಯ್ಯ ಕಣ್ಮರೆ

ಕೆ.ಬಿ.ಎಂದೇ ಪರಿಚಿತರಾಗಿದ್ದ ಪ್ರತಿಭಾವಂತ ನಟ ಕರಿಬಸವಯ್ಯ ಇಂದು ನಮ್ಮೊಂದಿಗಿಲ್ಲ.ಹಾಗಂತ ಅವರು ಜೀವ ತುಂಬಿದ ಪಾತ್ರಗಳಿಗಾಗಲಿ,ಅವರು ಮೂಡಿಸಿದ ದಾಖಲಾರ್ಹ ಹೆಜ್ಜೆಗಳಿಗಾಗಲಿ ಯಾವತ್ತೂ ಕೊನೆಯೆಂಬುದಿಲ್ಲ.ನಾಟಕವಿರಲಿ,ಧಾರಾವಾಹಿಯಿರಲಿ,ಸಿನಿಮಾ ಇರಲಿ ಅಥವಾ ಹರಿಕಥೆ-ಹಾಸ್ಯ ಕಾರ್ಯಕ್ರಮಗಳಿರಲಿ,ಅಲ್ಲಿ ಕರಿಬಸವಯ್ಯ ತಮ್ಮದೇ ವಿನೂತನ ಶೈಲಿಯ ಪ್ರತಿಭಾ ಪ್ರದರ್ಶನದಿಂದ ಕಲಾ ರಸಿಕರ ಮನಸುಗಳಲ್ಲಿ ನವಿರು ಭಾವನೆಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದರು.

ನೆಲಮಂಗಲ ಸಮೀಪದ ಕೊಡಿಗೆಹಳ್ಳಿಯಿಂದ ಕನಸುಗಳ ಬುತ್ತಿಯನ್ನು ಹೆಗಲಿಗೇರಿಸಿಕೊಂಡು ಬೆಂಗಳೂರಿನ ಬೀದಿಗಳಲ್ಲಿ ತಿರುಗುತ್ತಿದ್ದ ಕರಿಬಸವಯ್ಯನವರಿಗೆ ಮೊದಲು ಕೈ ಹಿಡಿದಿದ್ದು ರಂಗಭೂಮಿ.ಮೊದಲೆಲ್ಲ ಚಿಕ್ಕ ಚಿಕ್ಕ ಪಾತ್ರಗಳನ್ನೂ ನಿರ್ವಹಿಸುತ್ತಿದ್ದ ಇವರು ಆ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುವ ಮೂಲಕ ಹಿರಿಯ ರಂಗತಜ್ಞರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.ಕ್ರಮೇಣ ಪ್ರಮುಖ ಪಾತ್ರಗಳು ಇವರನ್ನು ಹುಡುಕಿಕೊಂಡು ಬರತೊಡಗಿದವು.೧೯೮೯ ರಲ್ಲಿ 'ರೂಪಾಂತರ'ಕ್ಕೆ ಸೇರಿದ ನಂತರವಂತೂ ಕರಿಬಸವಯ್ಯನವರ ಇಮೇಜೇ ಬದಲಾಗತೊಡಗಿತು.

ನಿರಂತರ ರಂಗ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.'ತಲೆದಂಡ' ನಾಟಕದ ಬಸವಣ್ಣನ ಪಾತ್ರವಿರಬಹುದು,'ಮುಸ್ಸಂಜೆಯ ಕಥಾ ಪ್ರಸಂಗ'ದ ಬಸ್ಯನ ಪಾತ್ರವಿರಬಹುದು,'ಕರ್ವಾಲೋ'ದ ಬಿರಿಯಾನಿ ಕರಿಯನ ಪಾತ್ರವಿರಬಹುದು,ಗಾಂಧೀ ಜಯಂತಿ,ಗುಣಮುಖ,ಬಡೇ ಸಾಬ್ ಪುರಾಣ,ಮಳೆ ಬೀಜ ಸೇರಿದಂತೆ ಅನೇಕ ನಾಟಕಗಳಲ್ಲಿ ಅವರು ನಿರ್ವಹಿಸಿದ ವಿಭಿನ್ನ ಪಾತ್ರಗಳಿರಬಹುದು-ಯಾವುದೇ ಪಾತ್ರವಿದ್ದರೂ ಪಾತ್ರವೇ ತಾವಾಗಿ ಪರಕಾಯ ಪ್ರವೇಶ ಮಾಡುತ್ತಿದ್ದಂತಹ ಅಪೂರ್ವ,ಅನನ್ಯ ಕಲಾವಿದ ಕರಿಬಸವಯ್ಯನವರು.

ಯಾವಾಗ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದರೋ ಸಿನಿಮಾ ಮಂದಿಯ ಕಣ್ಣು ಕೆ.ಬಿ.ಯವರ ಕಡೆ ಹರಿಯಿತು.ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ತಮ್ಮ ನಿರ್ದೇಶನದ 'ಉಂಡು ಹೋದ ಕೊಂದು ಹೋದ'ಚಿತ್ರದಲ್ಲಿ ಅವಕಾಶ ನೀಡಿದರು.ಆ ಚಿತ್ರ ಯಾವಾಗ ಭರ್ಜರಿ ಯಶಸ್ಸು ಸಾಧಿಸಿತೋ ಕರಿಬಸವಯ್ಯನವರಿಗೆ ಅನೇಕ ಅತ್ಯುತ್ತಮ ಅವಕಾಶಗಳು ಬರತೊಡಗಿದವು.ಕೊಟ್ರೇಶಿ ಕನಸು,ಜನುಮದ ಜೋಡಿ,ಮುಂಗಾರಿನ ಮಿಂಚು,ಯಾರಿಗೆ ಸಾಲತ್ತೆ ಸಂಬಳ-ಚಿತ್ರಗಳನ್ನೊಳಗೊಂಡಂತೆ ಹತ್ತು ಹಲವು ಬಗೆಯ ಪಾತ್ರಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮದೇ ಹೆಜ್ಜೆ ಗುರುತು ಮೂಡಿಸುವಲ್ಲಿ ಯಶಸ್ವಿಯಾಗತೊಡಗಿದರು.

ಕರಿಬಸವಯ್ಯನವರು ಸ್ವಭಾವತಃ ತುಂಬ ಚುರುಕಿನ ಮನುಷ್ಯರಾಗಿದ್ದರು.ದಿನದ ಇಪ್ಪತ್ನಾಲ್ಕು ಗಂಟೆ ಯಾವುದಾದರೊಂದು ಕೆಲಸದಲ್ಲಿ ನಿರತರಾಗಿ ಸದಾ ಲವಲವಿಕೆಯಿಂದಿರುತ್ತಿದ್ದರು. ಕೆ.ಬಿ.ಯವರ ಮತ್ತೊಂದು ಇಷ್ಟವಾಗುವ ಅಂಶವೆಂದರೆ ಎಂಥವರೊಂದಿಗೂ ಒಗ್ಗಿಬಿಡುವ,ಇಷ್ಟವಾಗಿಬಿಡುವ ವ್ಯಕ್ತಿತ್ವ.ತಾವೊಬ್ಬ ಪ್ರಸಿದ್ಧ ನಟನೆಂಬ ಕಿಂಚಿತ್ತು ಅಹಂಕಾರವಿಲ್ಲದೆ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು.ತಮ್ಮ ಕಾಯಕದಲ್ಲಿ ಸದಾ ದೇವರನ್ನು ಕಾಣಲೆತ್ನಿಸುತ್ತಿದ್ದರು.ಅವರ ಸರಳತೆ ಹಾಗು ಸಹೃದಯತೆಗೆ ಹಲವಾರು ಉದಾಹರಣೆ ಕೊಡಬಹುದು:ಹರಿಕಥೆ ನಡೆಸಿಕೊಡಬೇಕೆಂದು ಎಲ್ಲಿಂದ ಕರೆ ಬಂದರೂ ತಕ್ಷಣ ಹೊರಟುಬಿಡುತ್ತಿದ್ದರು,ಹಾಸ್ಯ ಕಾರ್ಯಕ್ರಮಗಲಿದ್ದರೂ ಅಷ್ಟೇ,ಬಿಡುವು ಸಿಕ್ಕಾಗೆಲ್ಲ ಉತ್ಸಾಹದಿಂದ ಭಾಗವಹಿಸಿ ನೆರೆದವರೆದುರು ತಮ್ಮ ಸ್ಫುಟವಾದ ಮಾತುಗಳ ಮೂಲಕ ನಗೆಯ ಹೊಳೆಯನ್ನೇ ಹರಿಸಿ ಬಿಡುತ್ತಿದ್ದರು.

ಸಿನಿಮಾ,ಕಿರುತೆರೆಗಳಲ್ಲಿ ತಾವೆಷ್ಟೇ ಬಿಜಿಯಾಗಿದ್ದರೂ ರಂಗಭೂಮಿಯ ಮೇಲೆ ಮಾತೃಸಂಬಂಧ ಹೊಂದಿದ್ದರೆಂಬುದಕ್ಕೆ ಸಾಕ್ಷಿ ಅವರು 'ರೂಪಾಂತರ'ದ ಜೊತೆ ಇಟ್ಟುಕೊಂಡಿದ್ದ ಭಾವನಾತ್ಮಕ ಸಂಬಂಧ.'ರೂಪಾಂತರ'ದ ಅಧ್ಯಕ್ಷರಾಗಿದ್ದ ಕರಿಬಸವಯ್ಯನವರು ಸಂಸ್ಥೆಯ ಏಳ್ಗೆಗಾಗಿ ಅವಿರತ ದುಡಿಯುತ್ತಿದ್ದರು.ಅನೇಕ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದರು.ಅವುಗಳಲ್ಲಿ ಮುಖ್ಯವಾಗಿ,'ರೂಪಾಂತರ'ದ ಕಲಾವಿದ,ತಂತ್ರಜ್ಞರಿಗೆ ಕೇಂದ್ರ ಸರ್ಕಾರದ ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿ ಆರ್ಥಿಕ ಸಹಾಯ ದೊರಕಿಸಿ ಕೊಡುವುದು,ಗ್ರಾಮೀಣ ಪ್ರದೇಶಗಳಲ್ಲಿ ಯಥೆಚ್ಚ್ಹವಾದ ರಂಗ ಚಟುವಟಿಕೆಗಳನ್ನ ಹಮ್ಮಿಕೊಂಡು ಯುವಕ-ಯುವತಿಯರಲ್ಲಿ ರಂಗಾಸಕ್ತಿ ಮೂಡಿಸುವುದು,ಹೊಸದಾಗಿ,ವಿಭಿನ್ನವಾಗಿ ಯೋಚಿಸುವ ಹೊಸತಲೆಮಾರಿನ ಯುವ ನಾಟಕಕಾರರಿಂದ ಹೊಸ ಬಗೆಯ ನಾಟಕಗಳನ್ನು ಬರೆಸಿ ರಂಗಕ್ಕೆ ತರುವುದು,ಹಾಗೆಯೇ ಹಿರುಯ ನಾಟಕಕಾರರ ನಾಟಕಗಳಲ್ಲಿನ ದಾರ್ಶನಿಕತೆ,ಜೀವನ ಪ್ರೀತಿ,ವ್ವೈಚಾರಿಕತೆ,ಮಾನವೀಯ ಸಂಬಂಧಗಳ ಕುರಿತು ಅರಿವು ಮೂಡಿಸುವುದು, ಸಮಾಜಮುಖಿಯಾಗಿರುವ ಕಥೆಗಳನ್ನು ಆರಿಸಿಕೊಂಡು ರಂಗರೂಪ ನೀಡುವುದು,ಹಾಗೂ ಕಳೆದ ದಶಕಗಳಲ್ಲಿ 'ರೂಪಾಂತರ' ಸಂಸ್ಥೆ ನಡೆದು ಬಂದ ದಾರಿಯನ್ನೂ,ಏರಿದ ಎತ್ತರವನ್ನೂ ಒಂದು ಕಡೆ ದಾಕ್ಯುಮೆಂಟಾಗಿಸುವುದು ಹಾಗು ನಂತರದ ತಲೆಮಾರಿನ ರಂಗಭೂಮಿಗೆ ಹೊಸ ದಿಕ್ಕು,ಹೊಸ ಚೇತನ ಒದಗಿಸಬೇಕೆಂದು ಕನಸು ಕಂಡಿದ್ದರು.

'ರೂಪಾಂತರ' ಸಂಸ್ಥೆಗೂ ಅಷ್ಟೇ,ಕೆ.ಬಿ.ಯವರೆಂದರೆ ಇನ್ನಿಲ್ಲದ ಪ್ರೀತಿ.ಮೂರು ವರ್ಷಗಳ ಹಿಂದೆಯಷ್ಟೇ ಕರಿಬಸವಯ್ಯನವರ ಜನ್ಮದಿನದಂದು ರವೀಂದ್ರ ಕಲಾಕ್ಷೇತ್ರದಲ್ಲಿ 'ಕತ್ತಲಲ್ಲು ಯಶಸ್ಸಿನ ತ್ರಿಶೂಲ ಹಿಡಿದ ಕಥೆ' -ಎಂಬ ಹೆಸರಿನ ಅಭಿನಂದನಾ ಗ್ರಂಥ ಹೊರತರಲಾಯಿತು.ಕೆ.ಎಸ್.ಡಿ.ಎಲ್.ಚಂದ್ರು ಹಾಗು ನರೇಂದ್ರ ಬಾಬು ಈ ಕೃತಿಯ ಸಂಪಾದಕರು.ವಿಪರ್ಯಾಸವೆಂದರೆ ಅದೇ ರವೀಂದ್ರ ಕಲಾಕ್ಷೇತ್ರ ಆವರಣದ 'ಸಂಸ'ಬಯಲು ರಂಗಮಂದಿರದಲ್ಲೇ ಕೆ.ಬಿ.ಯವರಿಗೆ ಅಂತಿಮ ನಮನ ಸಲ್ಲಿಸಬೇಕಾದ ದುಃಖದ ಸ್ಥಿತಿ ಎದುರಾಯಿತು.

ಕನಕದಾಸರ 'ರಾಮಧಾನ್ಯ' ನಾಟಕ 'ರೂಪಾಂತರ'ದ ವತಿಯಿಂದ ಇಪ್ಪತ್ತ ನಾಲ್ಕು ಪ್ರದರ್ಶನ ಕಂಡಿತ್ತು.ಇಪ್ಪತ್ತೈದನೇ ಅದ್ಧೂರಿ ಪ್ರದಶನಕ್ಕಾಗಿ ಕರಿಬಸವಯ್ಯನವರು ತಂಡದೊಂದಿಗೆ ಸಮಾಲೋಚನೆ ನಡೆಸಿ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಿದ್ದರು.ಅಷ್ಟರಲ್ಲಿ ಅವರನ್ನು ಕಳೆದುಕೊಂಡಿದ್ದೇವೆ.ಇವರ ಮುಂದಾಳತ್ವದಲ್ಲಿ ಸಜ್ಜುಗೊಂಡಿದ್ದ ಇಟಗಿ ಈರಣ್ಣನವರ 'ಯಹೂದಿ ಹುಡುಗಿ' ನಾಟಕ ಕಳೆದ ವಾರವಷ್ಟೇ ಮುಂಬಯಿಯಲ್ಲಿ ನಡೆದ 'ಅಖಿಲ ಭಾರತ ಕುವೆಂಪು ಸ್ಮಾರಕ ನಾಟಕ ಸ್ಪರ್ಧೆ'ಯಲ್ಲಿ ಮೊದಲನೇ ಬಹುಮಾನ ಪಡೆದಿತ್ತಲ್ಲದೆ ವಿವಿಧ ವಿಭಾಗಗಳಲ್ಲಿ ಒಟ್ಟು ಏಳು ಪ್ರಶಸ್ತಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.ಆ ಸುದ್ಧಿ ಕೇಳಿ ಕರಿಬಸವಯ್ಯ ಸಂತಸ ವ್ಯಕ್ತ ಪಡಿಸಿದ್ದರು.ಅದು ಹೆಚ್ಚು ಕಾಲ ಉಳಿಯಲಿಲ್ಲ.

ಇನ್ನು ಪ್ರಶಸ್ತಿಗಳ ವಿಷಯಕ್ಕೆ ಬಂದರೆ,ಕೆ.ಬಿ.ಯವರಿಗೆ 'ಕೊಟ್ರೇಶಿ ಕನಸು'ಚಿತ್ರದ ಅದ್ಭುತ ಅಭಿನಯಕ್ಕಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.ಆದರೂ ಇವರ ಪ್ರತಿಭೆಗೆ ಸಿಗಬೇಕಾದ ಗೌರವ,ಸ್ಥಾನಮಾನ ಸಿಗಲಿಲ್ಲವೆಂದೇ ಹೇಳಬಹುದು.ಕಳೆದ ಸಾಲಿನ 'ರಾಜ್ಯೋತ್ಸವ ಪ್ರಶಸ್ತಿ'ಗಾಗಿ ರೂಪಿಸಿದ್ದ ಪಟ್ಟಿಯಲ್ಲಿ 'ಕನ್ನಡ ಮತ್ತು ಸಂಸ್ಕೃತಿ ಇಲಾಖೆ ' ಕರಿಬಸವಯ್ಯನವರ ಹೆಸರನ್ನೂ ಸೇರಿಸಿತ್ತಾದರೂ ಕೆಲವು ಒಳ ಒಪಾಂದ ಅರ್ಥಾತ್ ಲಾಬಿಗಳಿಂದಾಗಿ ಕೆ.ಬಿ. ಪ್ರಶಸ್ತಿ ವಂಚಿತರಾದರೆಂದು ಅಲ್ಲಲ್ಲಿ ಕೇಳಿಬಂತು.ಅದೇ ರೀತಿ,'ನಾಟಕ ಅಕಾಡೆಮಿ'ಯೂ ಕೂಡ ಕರಿಬಸವಯ್ಯನವರನ್ನ ನಿರ್ಲಕ್ಷಿಸಿತೆಂದೇ ಹೇಳಬಹುದು.ಯಾರು ಪ್ರಶಸ್ತಿ ಕೊಟ್ಟರೂ,ಕೊಡದಿದ್ದರೂ ಕೆ.ಬಿ.ಯಂತಹ ಮಹಾನ್ ಕಲಾ ತಪಸ್ವಿ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದು ಹೋದರು.ಅಷ್ಟು ಸಾಕು.

'ರೂಪಾಂತರ' ಸಂಸ್ಥೆ ಕೆ.ಬಿ.ಯಾರ ಹೆಸರಿನಲ್ಲಿ ಒಂದು ರಂಗ ಪುರಸ್ಕ್ರಾರ ನೀಡುವ ಉದಾತ್ತ ಯೋಜನೆ ಕೈಗೊಂಡಿರುವುದು ನಿಜಕ್ಕೂ ಒಳ್ಳೆಯ ಆಲೋಚನೆ.ಅದೇ ರೀತಿ ಅವರ ಹೆಸರಿನಲ್ಲಿ ನಾಟಕೋತ್ಸವದಂತಹ ಸ್ವಾಗತಾರ್ಹ ಯೋಜನೆಗಳನ್ನೂ ರೂಪಿಸುತ್ತಿರುವುದು ಮೆಚ್ಚುವಂಥದ್ದು.ಒಳಜಗಳಗಳಲ್ಲಿಯೇ ಮುಳುಗಿರುವ ಸೋ ಕಾಲ್ಡ್ ಸರ್ಕಾರ ಕಲಾವಿದರಿಗೆ ಗೌರವ ನೀಡುವುದನ್ನ 'ರೂಪಾಂತರ'ದವರಿಂದ ಕಲಿತುಕೊಳ್ಳಲಿ.ನಾಯಕ ನಟರು ಸತ್ತಾಗ ವಹಿಸುವ ಕಾಳಜಿ ಪೋಷಕ ನಟರ ಮೇಲೂ ಇರಲಿ.

"ಮಸಣದ ಹೂವಿಗೆ ಹಾಡಿನ ಕಾಣಿಕೆ"

'ಎಕ್ಕುಂಡಿಯವರ ಕೈ ಕುಲುಕುತ್ತಾ ...'
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ೧೯೨೩ರಲ್ಲಿ ಜನಿಸಿ ೧೯೯೫ ರಲ್ಲಿ ಬೆಂಗಳೂರಿನಲ್ಲಿ ನಿಧನರಾದ ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರು ಸು.ರಂ. ಎಕ್ಕುಂಡಿ ಎಂದೇ ಪರಿಚಿತರು. ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದುಕೊಂಡು ಕಾವ್ಯಕೃಷಿಯನ್ನು ಮಾಡುತ್ತಾ ಕನ್ನಡ ಸಾಹಿತ್ಯರಂಗ ದಲ್ಲಿ ವಿಶಿಷ್ಟವಾದ ಸ್ಥಾನವನ್ನು ಗಿಟ್ಟಿಸಿಕೊಂಡವರು. ಮೈಥಾಲಜಿ ಮತ್ತು ವರ್ತಮಾನಗಳ ನಡುವಣ ಜಿಜ್ಞಾಸೆಗಳಿಗೆ ಉತ್ತರ ಹುಡುಕುತ್ತಾ ಹೊರಟು ಹೊಸ ಚಿಂತನೆಗಳ ಹುಟ್ಟಿಗೆ ಕಾರಣಕರ್ತರಾದರು.

ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿಲ್ಲಿ ವಿ.ಕೃ.ಗೋಕಾಕ್ ಹಾಗು ರಂ.ಶ್ರೀ. ಮುಗಳಿಯವರ ಶಿಷ್ಯನಾಗಿ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಸ್ವೀಕರಿಸಿ ಪಧವಿ ಪಡೆದವರು. ಕುತೂಹಲಕರ ಸಂಗತಿಯೆಂದರೆ, ವಿದ್ಯಾರ್ಥಿದೆಸೆಯಲ್ಲಿ ಗಂಗಾಧರ ಚಿತ್ತಾಲ ಇವರ ಸಹಪಾಠಿಯಾಗಿದ್ದರು. ಹೀಗೆ, ಸಾಹಿತ್ಯದ ಒಡನಾಡಿಗಳ ಒಡನಾಟದಲ್ಲಿದ್ದುಕೊಂಡು ತಮ್ಮೊಳಗಿನ ಸೃಜನಶೀಲತೆಗೆ ಕಾವು ಕೊಡುತ್ತಾ ಮುಂದೊಂದು ದಿನ ದೊಡ್ಡ ಸಾಹಿತಿಯಾಗಿ ರೂಪುಗೊಂಡರು.
ಕಾವ್ಯ, ಸಣ್ಣಕತೆಗಳನ್ನು ರಚಿಸುವುದರಲ್ಲಿ ನಿಸ್ಸೀಮರಾಗಿದ್ದ ಎಕ್ಕುಂಡಿಯವರು ಎರಡು ರಷ್ಯನ್ ಕಾದಂಬರಿಗಳನ್ನು ಕನ್ನಡಿಗರಿಗಾಗಿ ಅನುವಾದಿಸಿಕೊಟ್ಟಿದ್ದಾರೆ. ಬಕುಳದ ಹೂವುಗಳು, ಉಭಯ ಭಾರತಿ, ಸುಭದ್ರ, ಮತ್ಸ್ಯಗಂಧಿ, ಕಥನ ಕಾವ್ಯಗಳು, ಹಾವಾಡಿಗನ ಹುಡುಗಿ ಹಾಗೂ ಬೆಳ್ಳಕ್ಕಿಗಳು ಇವರ ಪ್ರಮುಖ ಕೃತಿಗಳು. ಬೆಳ್ಳಕ್ಕಿ ಹಿಂಡು ಎಕ್ಕುಂಡಿಯವರ ಸಮಗ್ರ ಕಾವ್ಯ. ತಮ್ಮ ಕವಿತೆಗಳ ಮೂಲಕ ಕನ್ನಡ ಕಾವ್ಯ ರಸಿಕರ ಗಮನ ಸೆಳೆದ ಸು.ರಂ. ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.

ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸಾಹಿತ್ಯ ಅಕಾಡೆಮಿಯವರು ಪ್ರಶಸ್ತಿಯನ್ನು ನೀಡಿದ್ದರೆ, ಇವರ ಭೋದನಾ ಪ್ರತಿಭೆಯನ್ನು ಗೌರವಿಸು ನಿಟ್ಟಿನಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಜೊತೆಗೆ ಸೋವಿಯತ್ ಲ್ಯಾಂಡ್ ಅವಾರ್ಡ್‌ಗಳು ಎಕ್ಕುಂಡಿಯವರ ಪಾಲಾಗಿವೆ. ಇಷ್ಟೊಂದು ಹಿನ್ನೆಲೆಯಿರುವ ಎಕ್ಕುಂಡಿಯವರ ಯಾವ ಕಾಣಿಕೆ ನೀಡಲಿ ಕವಿತೆಯು ಎಸ್.ಆರ್. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂವು ಚಿತ್ರದಲ್ಲಿ ಚಿತ್ರಗೀತೆಯಾಗಿದೆ. ವಿಜಯ್‌ಭಾಸ್ಕರ್ ರಾಗ ಸಂಯೋಜನೆಯುಳ್ಳ ಈ ಗೀತೆಗೆ ಡಾ|| ಎಸ್.ಪಿ. ಬಾಲಸುಬ್ರಮಣ್ಯಂ ರವರು ಧ್ವನಿಯಾಗಿದ್ದಾರೆ. ೧೯೮೫ರಲ್ಲಿ ತೆರೆಕಂಡ ಮಸಣದ ಹೂವು ಈ ಗೀತೆ ಸಂಗೀತ ಪ್ರಿಯರ ಮನಸ್ಸಿನಲ್ಲಿ ಹಾಸುಹೊಕ್ಕಾಗಿರುವ ಅಂಶ ಎಕ್ಕುಂಡಿಯವರ ಭಾವನೆಗಳ ಜೀವಂತಿಕೆಯನ್ನು ಎತ್ತಿಹಿಡಿಯುತ್ತದೆ.

'ಪುಟ್ಟಣ್ಣನ ಸ್ಪಷ್ಟ ನಿಲುವು'
ಕನ್ನಡ ಕಾದಂಬರಿಗಳನ್ನು ತೆರೆಮೇಲೆ ತಂದು ಹೊಸ ಅಲೆ ಸೃಷ್ಠಿಸಿದ ಕಣಗಾಲ್ ಪುಟ್ಟಣ್ಣನವರು ಕನ್ನಡ ಚಿತ್ರರಂಗದ ಅನರ್ಘ್ಯರತ್ನ. ಕಾವ್ಯ, ಕಥೆ, ನಾಟಕ ಹಾಗೂ ಕಾದಂಬರಿಗಳ ಅಧ್ಯಯನದ ಅನಿವಾರ್ಯತೆ ಒಬ್ಬ ಚಿತ್ರ ನಿರ್ದೇಶಕನಿಗೆ ಎಷ್ಟು ಅವಶ್ಯಕ ಎನ್ನುವುದನ್ನು ಪುಟ್ಟಣ್ಣನವರು ತೋರಿಸಿಕೊಟ್ಟವರು. ತಾವು ನಿರ್ದೇಶಿಸಿದ ಬಹುತೇಕ ಚಿತ್ರಗಳಲ್ಲಿ ಪ್ರಸಿದ್ಧ ಕವಿಗಳ ಗೀತೆಗಳನ್ನು ಬಳಸಿಕೊಂಡು ಚಿತ್ರದ ಸಂಗೀತದ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಪ್ರೇಕ್ಷಕನ ಮನಸ್ಸಿಗೆ ಮುದನೀಡುವುದರ ಬಗ್ಗೆ ನಮ್ಮ ನಾಡಿನ ಸಾಹಿತ್ಯ ಜನರಿಗೆ ತಲುಪುವುದಕ್ಕೂ ಸಹಕರಿಸಿದವರು.
ಇತ್ತೀಚಿನ ದಿನಗಳಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ರಚನೆ, ನಿರ್ದೇಶನ - ಹೀಗೆ ಉದ್ದವಾದ ಪಟ್ಟಿಯ ಕೆಳಗೆ ತಮ್ಮ ಹೆಸರನ್ನು ಲಗತ್ತಿಸಿ ಪ್ರೇಕ್ಷಕನ ಮನಸ್ಸಿಗೆ ಕಿರಿಕಿರಿ ಉಂಟುಮಾಡುವ ಸ್ವಯಂಘೋಷಿತ ಬುದ್ಧಿವಂತರ ನಡುವೆ ಪುಟ್ಟಣ್ಣನಂತಹ ನಿಜವಾದ ಕ್ರಿಯಾಶೀಲ ವ್ಯಕ್ತಿ ವಿಶೇಷವಾಗಿ ನಿಂತು ಮಾದರಿಯಾಗುತ್ತಾರೆ. ದೊಡ್ಡ ನಿರ್ದೇಶಕನಾಗಬೇಕೆನ್ನುವ ಹಂಬಲದ ಜೊತೆಗೆ ಅಧ್ಯಯನವೂ ಮುಖ್ಯ ಎಂದು ಪರೋಕ್ಷವಾಗಿ ಸಾರುತ್ತಾರೆ.

ತಾವು ಬರೆದದ್ದೇ ಕಥೆ, ಮಾಡಿದ್ದೇ ಸಿನಿಮಾ ಎಂಬೆಲ್ಲಾ ಭ್ರಮೆಗಳೊಂದಿಗೆ ಜೀವಿಸುತ್ತಿರುವ ಪ್ರಚಾರಪ್ರಿಯರ ನಡುವೆ ಪುಟ್ಟಣ್ಣ ನಿಜಕ್ಕೂ ದೊಡ್ಡ ವ್ಯಕ್ತಿಯಾಗುತ್ತಾರೆ. ನೀವೇ ಹೇಳಿ, ಇವತ್ತಿನ ಎಷ್ಟುಜನ ನಿರ್ದೇಶಕರಿಗೆ ಕಾದಂಬರಿ ಓದುವ ಹವ್ಯಾಸವಿದೆ, ಕಾವ್ಯಾಧ್ಯಯನದ ಉತ್ಸಾಹವಿದೆ ? ಹತ್ತು ಸಿ.ಡಿ. ನೋಡಿ ಒಂದು ಕಥೆ ಸಿದ್ಧಪಡಿಸುವ ಇಂತಹವರಿಂದ ಪ್ರೇಕ್ಷಕ ಏನು ತಾನೇ ನಿರೀಕ್ಷಿಸುತ್ತಾನೆ. ಉತ್ತಮ ಕತೆಗಾರರನ್ನು ಹತ್ತಿರ ಸೇರಿಸಿಕೊಳ್ಳದೇ ತನ್ನ ಸುತ್ತಮುತ್ತಲಿನವರ ಮೇಲೆ ನಂಬಿಕೆಯಿಟ್ಟು ಅಪ್ರಬುದ್ಧ ನಿರ್ದೇಶಕರಿಗೆ ಅವಕಾಶ ಕೊಟ್ಟು ಎಕ್ಕುಟ್ಟಿಹೋಗುತ್ತಿರುವ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇದೆ. ಇವರೆಲ್ಲಾ ಒಮ್ಮೆ ಪುಟ್ಟಣ್ಣ ಕಣಗಾಲ್‌ರವರನ್ನು ನೆನಪಿಸಿಕೊಂಡರೆ ಬುದ್ಧಿ ಬರಬಹುದು. ಹತ್ತು ಸಿ.ಡಿ. ನೋಡುವ ಬದಲಾಗಿ ಒಂದು ಕಾದಂಬರಿ ಓದುವುದರ ಉಪಯೋಗದ ಅರಿವು ಗೊತ್ತಾಗಬಹುದು. ಸಿನಿಮಾ ಎನ್ನುವುದು ಎರಡೂವರೆ ಗಂಟೆಗಳ ಕಾಲ ಸುತ್ತಿಬಿಡುವ ರೀಲಾಗಬಾರದು. ಎರಡೂವರೆ, ಮೂರೂವರೆ ದಶಕಗಳಾದರೂ ಮತ್ತೇ ಮತ್ತೇ ನೋಡಬೇಕೆನಿಸುವ ಜೀವಂತ ಕೃತಿಯಾಗಬೇಕು.

ಇನ್ನುಮುಂದೆಯಾದರೂ ಪುಟ್ಟಣ್ಣವರಂತ ನಮ್ಮ ಮಣ್ಣಿನ, ನಮ್ಮ ಸಂಸ್ಕೃತಿಯ, ನಮ್ಮ ಜೀವನಕ್ಕೆ ಹತ್ತಿರವಾದ ಕಥೆಗಳು ಚಿತ್ರಗಳಾಗಲಿ. ನಮ್ಮ ಸಾಹಿತಿಗಳ ಕಾದಂಬರಿಗಳು ತೆರೆಯ ಮೇಲೆ ಮೂಡಲಿ. ಹಾಳೂರಿಗೆ ಉಳಿದವನೇ ಗೌಡ ಎನ್ನುವ ಗಾದೆ ಸುಳ್ಳಾಗಲಿ. ಪ್ರಜ್ಞಾವಂತ, ಕ್ರಿಯಾಶೀಲ ನಿರ್ದೇಶಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬರಲಿ ಅವರಿಗೆ ಸದಭಿರುಚಿ ನಿರ್ಮಾಪಕರು ಸಾಥ್ ನೀಡಲಿ. ನಮ್ಮೆಲರಿಗೂ ಪುಟ್ಟಣ್ಣವರಿಗಿದ್ದ ಕಾದಂಬರಿ ಪ್ರೇಮ, ಸತ್ಯದ ಮೇಲಿನ ನಂಬಿಕೆ ಮನದಟ್ಟಾಗಲಿ, ಮಾದರಿಯಾಗಲಿ.


'ಎಕ್ಕುಂಡಿಯವರ ಕಲ್ಪನಾಲೋಕ'
ತನ್ನ ಪ್ರಿಯತಮೆಗೆ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಬೇಕಾದ ಸಂದರ್ಭದಲ್ಲಿ ನಾಯಕನ ಎದೆಯಾಳದಲ್ಲಿ ಮೂಡುವ ಭಾವನೆಗಳಿಗೆ ಸು.ರಂ. ಎಕ್ಕುಂಡಿಯವರ ಕವಿತೆ ಔಚಿತ್ಯಪೂರ್ಣವಾಗಿದೆ.
ಕವಿ ತನ್ನೊಳಗಿನ ರಮ್ಯಲೋಕವನ್ನು ನಮಗೆ ತೋರಿಸುವ ಪ್ರಯತ್ನ ಈ ಗೀತೆಯಲ್ಲಿದೆ. ಪ್ರೀತಿಗೆ ಮಿಗಿಲಾದ ಕಾಣಿಕೆ ಇಲ್ಲ. ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪ್ರೇಯಸಿಗೆ ಯಾವ ಉಡುಗೊರೆ ನೀಡಿದರೂ ಕಮ್ಮಿಯೇ ! ಈ ಸತ್ಯ ಎಕ್ಕುಂಡಿಯವರ ಕವಿ ಮನಸ್ಸಿಗೆ ಅರಿವಾಗಿದೆ, ಅದರ ಪರಿಣಾಮವೇ ಯಾವ ಕಾಣಿಕೆ ನೀಡಲಿ ನಿನಗೆ ಹಾಡು.ಯಾವ ಕಾಣಿಕೆ ನೀಡಲಿ ನಿನಗೆ ಓ ನನ್ನ ಪ್ರೇಯಸಿ ಎಂದು ಪ್ರಶ್ನಿಸುವ ಮೂಲಕ ಹಾಡು ಆರಂಭವಾಗುತ್ತದೆ. ತಾನು ನೀಡಬೇಕಾದ ಕಾಣಿಕೆ ಎಷ್ಟು ಅರ್ಥಪೂರ್ಣವಾಗಿರಬೇಕು ಎಂಬ ಪ್ರಶ್ನೆಯೂ ಈ ಸಾಲಿನಲ್ಲಿ ಧ್ವನಿಸುತ್ತದೆ ಅಥವಾ ತನಗೆ ಯಾವ ಕಾಣಿಕೆ ಬೇಕೆಂಬುದನ್ನು ತನ್ನವಳೇ ಹೇಳಲಿ ಎಂಬ ಆಶಯವೂ ತಲೆದೋರುತ್ತದೆ.

ಮಲೆನಾಡ ಕಣಿವೆಗಳ ಹಸಿರುಬನದಿಂದ ಗಿಣಿಯನ್ನು ತಂದುಕೊಡಲಾರೆ ಎಂದು ಕವಿ ಮುಂದುವರೆಸುತ್ತಾರೆ. ಹಾಗೊಂದುವೇಳೆ ಅದನ್ನು ತಂದು ನೀಡಿದರೆ ತನ್ನ ಆಶಯ ಪೂರ್ತಿಯಾಗದು ಎಂಬ ಗೂಢಾರ್ಥವೂ ಅಲ್ಲಿ ಅಡಗಿರಬಹುದು. ಹಾಗೆಯೇ, ಸಮುದ್ರದ ಅಲೆಗಳ ಮೇಲೆ ಉಯ್ಯಾಲೆಯಂತೆ ತೂಗುವ ಹಂಸನಾವೆಯನ್ನು ತರಲಾರೆ ಎನ್ನುತ್ತಾರೆ. ಇಲ್ಲಿ, ಕವಿ ಹಂಸವನ್ನು ನಾವೆಗೆ ಹೋಲಿಸಿ ತಮ್ಮ ಕಾವ್ಯಶಕ್ತಿಯನ್ನು ಮೆರೆದಿದ್ದಾರೆ. ಹಕ್ಕಿಗಳು ಹಾಡುವಾಗ ಧ್ವನಿಗೂಡಿಸು ವಂತಿರುವ ಮಂದಾನಿಲದ ವೀಣೆಯನ್ನು ತರಲಾರೆನೆಂದು ಹೇಳುತ್ತಾರೆ. ಮಂದಾನಿಲದ ವೀಣೆಯ ಪ್ರಯೋಗ ವಿಶೇಷವಾಗಿ ಗಮನ ಸೆಳೆಯುತ್ತದೆ. ನಂದನವನದಲ್ಲಿ ಅರಳಿನಿಂತು ಮಕರಂದ ಬೀರುವ ಮಂದಾರಪುಷ್ಪವನ್ನು ತರಲಾರೆನೆಂದು ಹೇಳುವ ಮೂಲಕ ಕವಿ ವಾಸ್ತವಾಂಶವನ್ನು ಗಮನದಲ್ಲಿಟ್ಟುಕೊಂಡೂ, ತಾನು ಏನೇ ಉಡುಗೊರೆ ನೀಡಿದರೂ ಕಡಿಮೆಯೇ ಎಂದು ಪರೋಕ್ಷವಾಗಿ ವ್ಯಕ್ತಪಡಿಸುತ್ತಾರೆ.

ಎಷ್ಟೋ ರಾಣಿಯರನ್ನು ತನ್ನ ಹೆಗಲಮೇಲೆ ಹೊತ್ತು ರಾಜಬೀದಿಗಳಲ್ಲಿ ಮೆರವಣಿಗೆ ಹೊರಟು ಎಲ್ಲರ ಗಮನ ಸೆಳೆದಿರುವ ಮುತ್ತಿನ ಪಲ್ಲಕ್ಕಿಯನ್ನೂ ತರಲಾರೆ ಎನ್ನುತ್ತಾರೆ. ಅಂತೆಯೇ, ಸೂರ್ಯ-ಚಂದ್ರರನ್ನೂ ತರಲಾರೆ ಎಂದು ಹೇಳುವ ಮೂಲಕ ಹಾಡಿಗೊಂದು ಅಂತ್ಯ ನೀಡುತ್ತಾರೆ.
ಇಲ್ಲಿ ನಾವು ಗಮನಿಸಬೇಕಾದ ಮುಖ್ಯಾಂಶವೆಂದರೆ, ಕವಿ ತನ್ನ ಕಲ್ಪನಾಲಹರಿಯಲ್ಲಿ ಏನೆಲ್ಲಾ ಕಲ್ಪಿಸಿಕೊಂಡರೂ ವಾಸ್ತವ ಅದಕ್ಕೆ ತದ್ವಿರುದ್ಧವಾಗಿರುತ್ತದೆ. ಅಸಾಧ್ಯವಾದುದನ್ನೆಲ್ಲಾ ಹಾಡಿನಲ್ಲಿ ಹಾಡಲಷ್ಟೇ ಚೆಂದ. ಆದರೆ, ನಿಜಜೀವನದಲ್ಲಿ ಕಾರ್ಯರೂಪಕ್ಕೆ ತರುವುದು ಸುಲಭದ ಮಾತಲ್ಲ. ಏನೇ ಆಗಲೀ, ಇಂಥದ್ದೊಂದು ಅದ್ಭುತಗೀತೆ ನಮಗಾಗಿ ನೀಡಿದ ಸು.ರಂ. ಎಕ್ಕುಂಡಿಯವರಿಗೆ ಧನ್ಯವಾದ ಸಲ್ಲಿಸೋಣ.


'ಯಾವ ಕಾಣಿಕೆ ನೀಡಲಿ ನಿನಗೆ'

ಯಾವ ಕಾಣಿಕೆ ನೀಡಲಿ ನಿನಗೆ
ಓ ನನ್ನ ಪ್ರೇಯಸಿ ?

ಮಲೆನಾಡ ಕಣಿವೆಗಳ ಹಸಿರು ಬನದಿಂದ
ನಿನಗಾಗಿ ಗಿಣಿಯೊಂದ ನಾ ತರಲಾರೆ,
ಸಾಗರದ ಅಲೆಗಳಲ್ಲಿ ಉಯ್ಯಾಲೆಯಾಡಿರುವ
ಹಂಸನಾವೆಯ ನಾ ತರಲಾರೆ !

ಹಕ್ಕಿಗಳ ಜತೆಗೆ ಸ್ವರವೆತ್ತಿ ಪಾಡಿರುವ
ಮಂದಾನಿಲದ ವೀಣೆಯ ತರಲಾರೆ,
ನಂದನವನದ ಮಂದಾರಪುಷ್ಪವ
ನಾ ನಿನಗೆ ತರಲಾರೆ !

ಹಲವು ಅರಸಿಯರ ಹೊತ್ತುಮೆರೆಸಿರುವ
ಮುತ್ತಿನ ಪಲ್ಲಕ್ಕಿಯ ನಾ ತರಲಾರೆ,
ಮಣ್ಣಿನಲಿ ನೀರಿನಲ್ಲಿ ಬದುಕನೆ ಸವೆಸಿರುವ
ಸೂರ್ಯಚಂದ್ರರ ನಾ ತರಲಾರೆ !