ಬುಧವಾರ, ಜುಲೈ 20, 2011

ಸುರಿಯಿತು ಬಿರುಮಳೆ

ಧೋ ಧೋ ಎನ್ನುತ ಸುರಿಯಿತು ಬಿರುಮಳೆ
ತಣ್ಣಗೆ ಮಲಗಿಸಿ ಕೆಂಧೂಳ
ಫಳಫಳ ಮಿಂಚಿನ ಆರತಿ ಎಲ್ಲೆಡೆ
ಢಂ ಢಂ ಗುಡುಗಿನ ಹಿಮ್ಮೇಳ

ಮರಗಿಡ ಬಳ್ಳಿಗೆ ಬೆಟ್ಟ ಕಲ್ಬಂಡೆಗೆ
ಸ್ನಾನ ಮುಗಿಸಿದ ಸಮಾಧಾನ
ಕಪ್ಪೆಯು ಮೆಲ್ಲಗೆ ಹೇಳಿತು ಮೀನಿಗೆ
ಹೊಸ ನೀರಲಿ ಬಾ ಈಜೋಣ

ನೆಲದಾ ಪರದೆಯ ಸರಿಸುತಾ ಬೀಜ
ಇಣಕಿದೆ ಗಗನಕೆ ಮುಖಮಾಡಿ
ಬಾ ಬಾ ಎನ್ನುತ ಬಿಸಿ ಕೈ ಚಾಚಲು
ಸೂರ್ಯನು ಎಡಬಲ ಎಲೆನೀಡಿ

ಹಿತ್ತಿಲಲಿ ಮೈ ಕಾಯಿಸಿಕೊಳುತಿದೆ
ಮಕ್ಕಳ ಮಣ್ಣಿನ ಗಣಪಯ್ಯ
ಕೆಸರಲಿ ತಕ ಥೈ ಎಳೆಪಾದಂಗಳು
ತಾತ ನೋಡದಿರಲಿ ದಮ್ಮಯ್ಯ

1 ಕಾಮೆಂಟ್‌:

  1. ನೆಲದಾ ಪರದೆಯ ಸರಿಸುತಾ ಬೀಜ
    ಇಣಕಿದೆ ಗಗನಕೆ ಮುಖಮಾಡಿ
    ಬಾ ಬಾ ಎನ್ನುತ ಬಿಸಿ ಕೈ ಚಾಚಲು
    ಸೂರ್ಯನು ಎಡಬಲ ಎಲೆನೀಡಿ
    thumba ne channagide hrudyake takuva hrudyashivana kavithegallu....

    ಪ್ರತ್ಯುತ್ತರಅಳಿಸಿ